ರಾಜಕಾರಣಿಗಳೇ ನಿಮಗೆ ಆಪತ್ತು ಕಾದಿದೆ : ಕೋಡಿಮಠ ಶ್ರೀ

ರಾಜ್ಯದ ಪ್ರಮುಖ ರಾಜಕೀಯ ನಾಯಕರುಗಳಿಗೆ ಆಪತ್ತು ಕಾದಿದೆ. ರಾಜಕೀಯದಲ್ಲಿ ನಡೆಯುತ್ತಿರುವ ಅನಾಚಾರಗಳೇ ಇದಕ್ಕೆಲ್ಲ ಕಾರಣ ಎಂದು ಕೋಡಿಮಠ ಶ್ರೀಗಳು ಪುಢಾರಿಗಳಿಗೆ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಯಾವ ನಾಯಕರಿಗೆ ಆಪತ್ತು ಕಾದಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಲು ಶ್ರೀಗಳು ನಿರಾಕರಿಸಿದ್ದಾರೆ.
ಹಿಂದೆ, ರಾಜಕಾರಣಿಗಳ ಬಗ್ಗೆ ಸ್ಪಷ್ಟವಾದ ಭವಿಷ್ಯ ನುಡಿದಿದ್ದಾಗ, ತಮ್ಮ ಮೇಲೆಯೇ ಆ ರಾಜಕಾರಣಿಗಳು ಕೆಂಡ ಕಾರಿದ್ದರು. ಆದ್ದರಿಂದ, ಸಮಯ ಬಂದಾಗ ಯಾವ ರಾಜಕಾರಣಿಗೆ ಏನು ಕಾದಿದೆ ಎಂದು ಸ್ಪಷ್ಟವಾಗಿ ನುಡಿಯುತ್ತೇನೆ ಎಂದು ಅವರು ಗದಗದಲ್ಲಿ ನುಡಿದಿದ್ದಾರೆ. ಭಕ್ತರೊಬ್ಬರ ಮನೆಯಲ್ಲಿ ಪೂಜಾ ಕೈಂಕರ್ಯ ಮಾಡಲು ಇಲ್ಲಿ ಅವರು ಬಂದಿದ್ದಾರೆ.
ಸಮ್ಮಿಶ್ರ ಸರಕಾರ : ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ. ಕೊನೆಗೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ. ಆ ಸರಕಾರ ಕೂಡ ಹೆಚ್ಚಿಗೆ ಬಾಳುವುದಿಲ್ಲ ಎಂದು ಕೋಡಿಮಠ ಶ್ರೀಗಳು ರಾಜಕೀಯ ಸ್ಥಿತಿಗತಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಕೆಲ ಪ್ರಮುಖ ನಾಯಕರ ಸಾವು ಕೂಡ ಸಂಭವಿಸಲಿದೆ ಎಂದಿದ್ದಾರೆ.
ಪ್ರಕೃತಿ ವಿಕೋಪ : ಈ ವರ್ಷದ ಕೊನೆಯಲ್ಲಿ ಪ್ರಕೃತಿ ಕೂಡ ರಾಜ್ಯದ ಮೇಲೆ ಮುನಿಸಿಕೊಳ್ಳಲಿದೆ ಎಂದು ಹೇಳಿ ಭವಿಷ್ಯದ ಬಗ್ಗೆ ನಂಬಿಕೆ ಇಟ್ಟ ನಾಗರಿಕರಲ್ಲಿ ಆತಂಕ ಮೂಡಿಸಿದ್ದಾರೆ. ರಾಜ್ಯದಲ್ಲಿ ಭಾರೀ ಅಕಾಲಿಕ ಮಳೆಯಾಗಬಹುದು, ಭೂಕಂಪ ಸಂಭವಿಸಬಹುದು, ವಿಷಮ ಗಾಳಿ ಬೀಸುವ ಸಾಧ್ಯತೆಯೂ ಇದೆ. ಹಿಂದಿಗಿಂತ ಈ ವರ್ಷ ಆಘಾತ ಹೆಚ್ಚಾಗಲಿದೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.












Click it and Unblock the Notifications