ಬೇಡಿಕೆ ಒಪ್ಪಿದ್ರೆ ಮಾತ್ರ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧೆ

ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯಾವುದೇ ಇತ್ಯರ್ಥವಾಗಿಲ್ಲ. ಶ್ರೀರಾಮುಲು ಅವರಿಗೇ ಬಿಜೆಪಿ ಬಿ ಫಾರಂ ನೀಡಲಿದೆ, ಅವರು ಸ್ಪರ್ಧಿಸುವುದು ಖಚಿತ ಎಂದು ಗದಗದಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದರೂ ಶ್ರೀರಾಮುಲು ಒಪ್ಪುತ್ತಾರಾ?
ಬಲ್ಲ ಮೂಲಗಳ ಪ್ರಕಾರ, ತಮ್ಮ ಬೆಂಬಲಿಗರೊಂದಿಗೆ ಸತತವಾಗಿ ಚರ್ಚೆ ನಡೆಸುತ್ತಿರುವ ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಕಣಕ್ಕೆ ಇಳಿಯಲಿದ್ದಾರೆ. ಟಿಕೆಟ್ ನೀಡಲು ಬಿಜೆಪಿ ನಾಯಕರು ತಯಾರಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಇದಕ್ಕೆ ಕಾರಣ ಶ್ರೀರಾಮುಲು ಬಿಜೆಪಿ ನಾಯಕರ ಮುಂದಿಟ್ಟಿರುವ ಬೇಡಿಕೆ. ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದರೆ ಗೃಹ ಖಾತೆ ತಮ್ಮ ಪಾಲಿಗೆ ಬರಬೇಕೆಂಬ ಬೇಡಿಕೆ ಅವರು ಇಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈಶ್ವರಪ್ಪ ಸೇರಿದಂತೆ ಇತರ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಇದೇ.
ಅವರಿಗೆ ಗೃಹ ಖಾತೆ ನೀಡಬೇಕಿದ್ದರೆ ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಆರ್ ಅಶೋಕ್ ಪದತ್ಯಾಗ ಮಾಡಬೇಕು ಅಥವಾ ಅವರನ್ನು ಬಲವಂತವಾಗಿಯಾದರೂ ಇಳಿಸಬೇಕು. ಇದು ಸಾಧ್ಯವೆ?
ಜನಾರ್ದನ ರೆಡ್ಡಿ ಜೈಲಲ್ಲಿರುವಾಗ ಸ್ಪರ್ಧಿಸುವುದು ಸರಿಯಲ್ಲ ಎಂದೇ ಹೇಳಿಕೆ ನೀಡುತ್ತಿದ್ದ ಶ್ರೀರಾಮುಲು ಪಕ್ಷೇತರರಾಗಿಯಾದರೂ ಸ್ಪರ್ಧಿಸುವುದೇಕೆ? ಮತ್ತೆ ಸ್ಪರ್ಧಿಸುತ್ತಿರುವುದಾದರೆ ಹಿಂದೆ ರಾಜೀನಾಮೆ ಸಲ್ಲಿಸಿದ್ದಾದರೂ ಏಕೆ? ಸ್ಪರ್ಧಿಸಿದರೂ ಮತದಾರರು ಮತ್ತೆ ಗೆಲ್ಲಿಸಿಯಾರೆ? ಉತ್ತರ ಚುನಾವಣೆಯ ನಂತರವೇ ತಿಳಿಯಲಿದೆ.












Click it and Unblock the Notifications