ಎಂಇಎಸ್ ಕಚೇರಿ ಧ್ವಂಸ : ಬೆಳಗಾವಿ ಉದ್ರಿಕ್ತ

ಕನ್ನಡಿಗರನ್ನು ಗೂಂಡಾ ಎಂದಿದ್ದಕ್ಕೆ ಪ್ರತಿದಾಳಿ ನಡೆಸಿರುವ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಚೇರಿಯನ್ನು ಗುರುವಾರ ಧ್ವಂಸ ಮಾಡಿದ್ದಾರೆ. ಮರಾಠಿ ಬೋರ್ಡುಗಳಿಗೆ ಕಪ್ಪುಮಸಿ ಬಳಿದಿದ್ದಾರೆ. ಇದಕ್ಕೆ ಪ್ರತಿಯಾಗಿ ನ.4, ಶುಕ್ರವಾರದಂದು 'ಬೆಳಗಾವಿ ಬಂದ್'ಗೆ ಎಂಇಎಸ್ ಸಂಘಟನೆ ಕರೆ ನೀಡಿದೆ.
ಆದರೆ ಬಂದ್ ಕರೆಗೆ ಬೆಳಗಾವಿ ಜಿಲ್ಲಾಧಿಕಾರಿ ಏಕರೂಪ್ ಕೌರ್ ಮತ್ತು ಸುಪರಿಂಟೆಂಡ್ ಆಫ್ ಪೊಲೀಸ್ ಸಂದೀಪ್ ಅವರು ಇನ್ನೂ ಸಮ್ಮತಿ ನೀಡಿಲ್ಲ. ಸಮ್ಮತಿ ನೀಡದಿದ್ದರೂ ತಾವು ಕನ್ನಡಿಗರ ಪುಂಡಾಟಿಕೆ ವಿರುದ್ಧ ಬಂದ್ ಮಾಡೇ ತೀರುವುದಾಗಿ ಎಂಇಎಸ್ ಸೆಡ್ಡು ಹೊಡೆದಿದೆ. ಕನ್ನಡ ಮರಾಠಿ ನಡುವಿ ಕಲಹ ಮತ್ತೆ ತಾರಕಕ್ಕೇರಿದ್ದು ಬೆಳಗಾವಿ ಉದ್ರಿಕ್ತವಾಗಿದೆ.
ಆಗಿದ್ದೇನೆಂದರೆ, ನ.1ರಂದು ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನ ಆಚರಿಸಿತ್ತು. ಆಗ ಕೆಲ ಪುಂಡರು ಅವರ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದರು. ಈ ಕೃತ್ಯವನ್ನು ಕನ್ನಡಿಗರ ಮೇಲೆ ಹೊರೆಸಿ ಮಂದಾ ಬಾಳೆಕುಂದ್ರಿ ಕನ್ನಡಿಗರನ್ನು 'ಗೂಂಡಾಗಳು' ಎಂದು ಜರಿದಿದ್ದರು.
ಇದಕ್ಕೆ ಕೈಕಟ್ಟಿ ಕೂಡದ ಕನ್ನಡ ರಕ್ಷಣಾ ವೇದಿಕೆಯ ಕಟ್ಟಾಳುಗಳು ಇಂದು ಎಂಇಎಸ್ ಕಚೇರಿಗೆ ಮುತ್ತಿಗೆ ಹಾಕಿ ಪೀಠೋಪಕರಣ, ಕಂಪ್ಯೂಟರ್ ಗಳನ್ನು ಸಂಪೂರ್ಣ ಧ್ವಂಸ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 30 ಜನ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಎಂಇಎಸ್ ಕಾರ್ಯಕರ್ತರು ಕೂಡ ಹಲಗಾ ಬಳಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ಬಸ್ಸುಗಳ ಗಾಜುಗಳು ಪುಡಿಪುಡಿಯಾಗಿವೆ.












Click it and Unblock the Notifications