ಬಾವುಟ ಹರಿದು ಹಾರಾಡುತ್ತಿದ್ದರೂ ಕೇಳುವವರಿರಲಿಲ್ಲ

ಆದರೆ, ಬಾವುಟ ಹಾರಿಸಿದ ದಿನವೇ ಹಾರಿಸಿದಲ್ಲೆಲ್ಲ ಹರಿದು ಹಂಚಿಹೋಗಿದ್ದರೂ ನಿರ್ಲಕ್ಷ್ಯವಹಿಸಿದರೆ ಹೇಗೆ? ಇಂಥ ಅಚಾತುರ್ಯಗಳಿಗೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು? ಅಸಲಿಗೆ ಕ್ರಮ ಕೈಗೊಳ್ಳುವವರಾದರೂ ಯಾರು?
ಯಾದಗಿರಿಯಲ್ಲಿ ಆಗಿರುವುದು ಇದೇ. ಕನ್ನಡ ರಾಜ್ಯೋತ್ಸವದ ದಿನದಂದು ಬಾವುಟ ಹಾರಿಸಿದಲ್ಲೆಲ್ಲ ಮಳೆ, ಗಾಳಿ, ಬಿಸಿಲಿಗೆ ತೊಯ್ದು, ಹರಿದು, ಒಣಗಿ ಹಾರಾಡುತ್ತಿದ್ದರೆ ಹೇಗಿರುತ್ತದೆ? ಹೀಗಾಗಿದ್ದರೂ ಅವನ್ನು ಬದಲಿಸುವವರಿರಲಿಲ್ಲ, ಕೇಳುವವರಂತೂ ಇರಲೇಯಿಲ್ಲ.
ಕೆಲವೆಡೆ ಕನ್ನಡ ಮಾತೆಯ ಫೋಟೋ ಇಟ್ಟು, ಕಬ್ಬಿಣದ ಸಲಾಕೆಯ ತುದಿಗೆ ಕನ್ನಡ ಧ್ವಜ ಹಾರಿಸಿ ಕಾಟಾಚಾರದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಇಷ್ಟಾದ ಮೇಲೆ ಧ್ವಜಕ್ಕೆ ಏನಾಗಿದೆಯೆಂದು ನೋಡುವವರೂ ಇರಲಿಲ್ಲ, ಕೇಳುವವರೂ ಇರಲಿಲ್ಲ.
ಹಳದಿ ಮತ್ತು ಕೆಂಪು ಬಣ್ಣಗಳ ಸಂಗಮದ ಶಲ್ಯಗಳನ್ನು ಕೊರಳಿಗೆ ಸುತ್ತಿ, ಆಚೆ-ಈಚೆ ಇಳಿಬಿಟ್ಟು ಹೊರಟರೆ ಇಂದು ಯಾರಾದೂ ಹೇಳುತ್ತಾರೆ ಇವರು ಕನ್ನಡಿಗರು? ಕನ್ನಡ ಬಾವುಟಕ್ಕೆ ಅವಮಾನ ಮಾಡುತ್ತಿರುವ ಇವರೆಂಥ ಕನ್ನಡಾಂಬೆಯ ವೀರಪುತ್ರರು? ಇದು ಕನ್ನಡಾಂಬೆಗೆ ಮಾಡಿದ ದ್ರೋಹವಲ್ಲವೆ?
ಅನೇಕ ಗಡಿನಾಡುಗಳನ್ನು ನಾವು ಈಗಾಗಲೆ ಪರರಾಜ್ಯಗಳಿಗೆ ದಾನವಾಗಿ ನೀಡಿಬಿಟ್ಟಿದ್ದೇವೆ. ಉಳಿದ ಗಡಿನಾಡುಗಳಲ್ಲಿ ಕನ್ನಡಕ್ಕಿಂತ ಪರಭಾಷೆಗಳ ಪ್ರಾಬಲ್ಯವೇ ಎದ್ದುಕಾಣುತ್ತಿದೆ. ಇವರನ್ನು ಈಗಲೆ ಶಿಕ್ಷಿಸದಿದ್ದರೆ ಮುಂದೆಯೂ ಹೀಗೇ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ?












Click it and Unblock the Notifications