ರೆಡ್ಡಿ ಗಣಿಗಾರಿಕೆ: ಸಿಬಿಐನಿಂದ ಆಂಧ್ರ ಮಾಜಿ ಗಣಿ ಸಚಿವೆ ವಿಚಾರಣೆ

ಕರ್ನಾಟಕ ಗಡಿಯ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಹೊತ್ತ ಜನಾರ್ದನ ರೆಡ್ಡಿಯವರ ಓಬಳಾಪುರಂ ಗಣಿ ಕಂಪೆನಿಗೆ (ಓಎಂಸಿ) ಗಣಿ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಬಿತಾ ಅವರನ್ನು ತನಿಖಾ ಸಂಸ್ಥೆ ಪ್ರಶ್ನಿಸಿತು.
ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರ ಸಂಪುಟದಲ್ಲಿ 2004ರಿಂದ 2009ರವರೆಗೆ ಸಬಿತಾ ಗಣಿ ಸಚಿವರಾಗಿದ್ದಾಗ, ಓಎಂಸಿಗೆ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಅವಧಿಯಲ್ಲಿ ಗಣಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶ್ರೀಲಕ್ಷ್ಮೀ ಅವರನ್ನು ಸಿಬಿಐ ತಂಡವು ಮತ್ತೊಮ್ಮೆ ಸುಮಾರು ನಾಲ್ಕು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ ಕೂಡಲೇ ಸಬಿತಾ ಅವರನ್ನೂ ಪ್ರಶ್ನಿಸಿದೆ.
ಓಎಂಸಿಗೆ ಗಣಿ ಗುತ್ತಿಗೆ ಪರವಾನಗಿ ನೀಡುವಾಗ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡವು ಈ ಮುನ್ನವೂ ಶ್ರೀಲಕ್ಷ್ಮೀ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರನ್ನು ತನಿಖೆಗೆ ಒಳಪಡಿಸಿತ್ತು.
ಸಬಿತಾ ಮತ್ತು ಶ್ರೀಲಕ್ಷ್ಮೀ ಅವರನ್ನು ಸಿಬಿಐ ತನಿಖೆಗೆ ಒಳಪಡಿಸುವ ಮೂಲಕ 2009ರಲ್ಲಿ ದಾಖಲಾದ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದಂತಾಗಿದೆ.











Click it and Unblock the Notifications