ಭ್ರಷ್ಟರ ಮ್ಯಾಲ ಅಡ್ವಾಣಿ ಕಣ್ಣು, ಅಡ್ವಾಣಿ ಮ್ಯಾಲ ಎಲ್ಲರ ಕಣ್ಣು

ಸಂಜೆ 4ರ ಸುಮಾರಿಗೆ ಬೆಂಗಳೂರಿಗೆ ಬಲಗಾಲಿಡಲಿರುವ ಬಿಜೆಪಿ ರಾಷ್ಟ್ರೀಯ ನಾಯಕ, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿಯವರು ಸಂಜೆ 5.30ರ ಸುಮಾರಿಗೆ ಭ್ರಷ್ಟಾಚಾರದ ವಿರುದ್ಧ ಮಾತುಗಳ ಮಳೆ ಸುರಲಿದ್ದಾರೆ. ಅದನ್ನು ಕೇಳಲು ಬರಲಿರುವವರಿಗಾಗಿ 20 ಸಾವಿರ ಆಸನಗಳನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಿದ್ಧಪಡಿಸಲಾಗಿದೆ.
ಕರ್ನಾಟಕದ ದೊಡ್ಡದೊಡ್ಡ ನಾಯಕರು ಮಾಡಿರುವ 'ಸಣ್ಣಸಣ್ಣ' ತಪ್ಪುಗಳಿಂದ ಬಿಜೆಪಿಗೆ ಭಾರೀ ಮುಜುಗರವಾಗಿದೆ. ಇದರ ಬಗ್ಗೆ ಮೊದಲೇ ಎಚ್ಚರಿಸಿದ್ದೆ ಎಂದು ಹೇಳಿರುವ ಅಡ್ವಾಣಿ, ಬಿಜೆಪಿಯ ಭ್ರಷ್ಟಾಚಾರದ ಬ್ರಹ್ಮಗಂಟನ್ನು ಹೇಗೆ ಬಿಡಿಸಲಿದ್ದಾರೆ ಎನ್ನುವದು ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆ.
ಈ ಜನ ಚೇತನ ಯಾತ್ರೆಯ ಬೆಂಗಳೂರು ಸಮಾವೇಶದ ಉಸ್ತುವಾರಿಯನ್ನು ಪ್ರಹ್ಲಾದ್ ಜೋಶಿ ಅವರಿಗೆ ವಹಿಸಲಾಗಿದೆ. ಮೊದಲು ಉಸ್ತುವಾರಿಯನ್ನು ಗೃಹ ಸಚಿವ ಆರ್ ಅಶೋಕ್ ಅವರಿಗೆ ವಹಿಸಲಾಗಿತ್ತು. ಅವರು ಕೂಡ ಭೂ ಹಗರಣದಲ್ಲಿ ಭಾಗಿಯಾಗಿದ್ದರಿಂದ ಉಸ್ತುವಾರಿಯನ್ನು ಅವರಿಂದ ಕಿತ್ತುಕೊಳ್ಳಲಾಗಿದೆ.
ಮುಂದಿನ ಯಾತ್ರೆ : ಬೆಂಗಳೂರಿನ ಸಭೆಯ ನಂತರ ಅಡ್ವಾಣಿಯವರ ರಥಯಾತ್ರೆ ಕರ್ನಾಟಕದಲ್ಲಿ ಮಂಗಳೂರು, ಉಡುಪಿ ಮತ್ತು ಕುಮಟಾ ಮಾರ್ಗವಾಗಿ ಸಂಚರಿಸಲಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿ ಅ.31ರಂದು 11 ಗಂಟೆಗೆ, ಅದೇ ದಿನ ಉಡುಪಿಯಲ್ಲಿ 2 ಗಂಟೆಗೆ ಮತ್ತು ನವೆಂಬರ್ 1ರಂದು ಕುಮಟಾದ ಮಾನಿಕಿ ಮೈದಾನದಲ್ಲಿ ಭಾಷಣ ಮಾಡಲಿದ್ದಾರೆ. ಅಲ್ಲಿಂದ ಅವರ ಯಾತ್ರೆ ಗೋವಾದಲ್ಲಿ ಮುಂದುವರಿಯಲಿದೆ.












Click it and Unblock the Notifications