ಮುಂದೈತೆ ನೋಡಿ ಮಾಜಿ ಸಿಎಂ ಕುಮಾರಣ್ಣನ ಆಟ

ಮೂರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಸಿಂಹಸ್ವಪ್ನರಾಗಿರುವ ಕುಮಾರಸ್ವಾಮಿ ಸರಕಾರದ ಬಣ್ಣ ಬಟಾಬಯಲು ಮಾಡಿದ ಪ್ರಮುಖ ರೂವಾರಿಯಲ್ಲೊಬ್ಬರು. ಸದ್ಯದ ರಾಜಕೀಯ ಪರಿಸ್ಥಿತಿ ಈ ರೀತಿ ಇರಬೇಕಾದರೆ ಇನ್ಮುಂದೆ ನಡೆಯುವುದೇ ಕುಮಾರಸ್ವಾಮಿ ಅವರ ಆಟ. ಬಿಜೆಪಿ ಪಕ್ಷದ ಭ್ರಷ್ಟಾಚಾರವನ್ನು ಒಂದೊಂದೇ ಬಯಲು ಮಾಡಿ ಸಾರ್ವಜನಿಕ ವಲಯದಲ್ಲಿ ಹೀರೋ ಆಗುವತ್ತ ಸಾಗುತ್ತಿದ್ದಾರೆ.
ಧರ್ಮಸ್ಥಳದ ಆಣೆ ಪ್ರಮಾಣದ ವಿಷಯದಲ್ಲಿ ನುಡಿದಂತೆ ನಡೆದು ಜಾತ್ಯಾತೀತವಾಗಿ ತನ್ನ ವರ್ಚಸ್ಸು ವೃದ್ದಿಸಿ ಕೊಂಡಿರುವ ಕುಮಾರಸ್ವಾಮಿ ಇತ್ತ ಯಡಿಯೂರಪ್ಪ ಜೈಲು ಸೇರಿದಾಗ ಪಕ್ಕಾ ವೃತ್ತಿಪರ ಹೇಳಿಕೆ ನೀಡಿ ಸೈ ಎನಿಸಿ ಕೊಂಡಿದ್ದಾರೆ. ಜೊತೆಗೆ ಯಾವ ಯಾವ ಸಮಯದಲ್ಲಿ ಏನೇನು ಮಾಡಬೇಕು ಎನ್ನುವ ಹಿತೋಪದೇಶ ದೊಡ್ಡ ಗೌಡರದ್ದು ಇರುವಾಗ ಕುಮಾರಸ್ವಾಮಿ ಜಾಣ್ಮೆಯ ರಾಜಕೀಯ ನಡೆ ಇಡೋದಂತೂ ಖಂಡಿತ.
ಇತ್ತ ಬಿಜೆಪಿ ಸಚಿವರ ಹಗರಣಗಳು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ದಿನಕ್ಕೊಂದು ಕೇಸ್, ಹಿಯರಿಂಗ್. ಯಾವ ಯಾವ ದಿನದಲ್ಲಿ ಏನೇನು ಹಿಯರಿಂಗ್ ಇದೆ ಅನ್ನೋದನ್ನ ಪಟ್ಟಿ ಮಾಡೋದೇ ಒಂದು ತ್ರಾಸಾಗಿ ಬಿಟ್ಟಿದೆ. ಇನ್ನು ಅಧಿಕೃತ ಕಾಂಗ್ರೆಸ್ ರಾಜ್ಯದಲ್ಲಿ ಒಡೆದ ಮನೆ. ಕಾಂಗ್ರೆಸ್ ನಲ್ಲಿ ಎಷ್ಟು ಒಳ ಗುಂಪು ಗಳಿವೆ ಅನ್ನೋದನ್ನ ಕೆಪಿಸಿಸಿ ಅಧ್ಯಕ್ಷರು ಅಥವಾ ಕಾರ್ಯಾಧ್ಯಕ್ಷರು ಈಗಿಂದಲೇ ಲೆಕ್ಕ ಹಾಕಲು ಶುರು ಮಾಡಿದರೆ ಮುಂದಿನ ಅಸೆಂಬ್ಲಿ ಚುನಾವಣೆಯ ಹೊತ್ತಿಗೆ ಸರಿಯಾದ ಲೆಕ್ಕ ಸಿಗಬಹುದೇನೋ?
ತನ್ನ ಆಪ್ತ ವಲಯದಲ್ಲಿ ಹೋರಾಟಕ್ಕೆ ಸಿದ್ದರಾಗಿ ಎಂದು ಈಗಾಗಲೇ ಮೆಸೇಜ್ ಕಳುಹಿಸಿರುವ ಕುಮಾರಸ್ವಾಮಿ ಅವರ ಮುಂದಿನ ನಡೆ ಮಾತ್ರ ನಿಗೂಢ. ಉಪ ಚುನಾವಣೆಯಲ್ಲಿ ಜಯ ಗಳಿಸಿದರೂ ಬಿಜೆಪಿ ತನ್ನ ವರ್ಚಸ್ಸು ಅಸ್ತಿತ್ವ ದಿನ ಹೋದಂತೆ ಕಳೆದು ಕೊಳ್ಳುತ್ತಿದೆ ಎನ್ನುವುದು ಮಾತ್ರ ವಾಸ್ತವತೆ.
ಕುಮಾರಸ್ವಾಮಿ ಮತ್ತು ದೇವೇಗೌಡ ರಾಜ್ಯದೆಲ್ಲಡೆ ಪ್ರವಾಸ ಮಾಡಿ ಜನರ ಕುಂದುಕೊರತೆಗಳ ಬಗ್ಗೆ ಸ್ಪಂದಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇನ್ನೆರಡು ಮೂರು ವಾರಗಳಲ್ಲಿ ಅವರ ಪ್ರವಾಸ ಶುರು ಆಗಬಹುದು. ಬಿಜೆಪಿ ಸರಕಾರ ನಡೆಸುತ್ತಿರುವ ಅವ್ಯವಾಹರಗಳನ್ನು ಎಳೆ ಎಳೆಯಾಗಿ ಜನರ ಮುಂದೆ ಇಟ್ಟು ಭ್ರಷ್ಟಾಚಾರದ ವಿರುದ್ದ ತಮ್ಮ ಪಕ್ಷ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವುದೇ ಜಾತ್ಯಾತೀತ ಜನತಾದಳದ ಮುಂದಿನ ಗುರಿ ಅನ್ನೋದು ಸ್ಪಷ್ಟ.












Click it and Unblock the Notifications