ಯಡ್ಡಿಗೆ ಸಿಗಲಿಲ್ಲ ಮಣ್ಣು, ಜಯಾಗೆ ನ.4ರ ತನಕ ರಿಲೀಫ್

ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯದಲ್ಲಿ ಅ.21ರಂದು ನಡೆದ ವಿಚಾರಣೆಗೆ 26 ಬೆಂಗಾವಲು ಕಾರಿನೊಂದಿಗೆ ಭಾರಿ ಭದ್ರತೆಯೊಂದಿಗೆ 'ಅಮ್ಮ' ಬಂದಿದ್ದರು.
ಜಡ್ಜ್ ಕೇಳಿದ ಸುಮಾರು 380 ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ್ದ ಜಯಲಲಿತಾ ಅವರು ಇಂದು ಸರಿ ಸುಮಾರು ಅಷ್ಟೇ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಎಚ್ ಎಎಲ್ ವಿಮಾನ ನಿಲ್ದಾಣದ ಮೂಲಕ ಮತ್ತೆ ಚೆನ್ನೈಗೆ ಮರಳಿದ್ದಾರೆ.
ಯಡಿಯೂರಪ್ಪ ಅಭಿಮಾನಿಗಳ ಆಕ್ರೋಶ: ಜಯಲಲಿತಾ ಕೇಸಿನ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಸುತ್ತ ಮುತ್ತ ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆ ತನಕ ನಿಷೇಧಾಜ್ಞೆ ವಿಧಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಯಿತು.
ಅದರಲ್ಲೂ ಮಂಡ್ಯಜಿಲ್ಲೆ ಬೂಕನಕೆರೆಯಿಂದ ಬಂದಿದ್ದ ಯಡಿಯೂರಪ್ಪ ಹುಟ್ಟೂರಿನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ನೋಡಲಾಗದಂತೆ ಮಾಡಿದ ಜಯಾ ಮೇಡಂಗೆ ಹಿಡಿಶಾಪ ಹಾಕುತ್ತಿದ್ದರು.
ಯಡಿಯೂರಪ್ಪ ಅವರು ನಮಗೆಲ್ಲ ಅನ್ನ ಇಕ್ಕಿದ್ದಾರೆ. ನಮ್ ತಂದೆ ಅವರು ಬಡವರಿಗೆ, ದೇವಸ್ಥಾನಕ್ಕೆ ಎಷ್ಟು ಮಾಡಿಲ್ಲ. ಕಾಣದಂತೆ ನುಂಗಿದವರನ್ನು ಬಿಟ್ಟು ನಮ್ಮಪ್ಪನ ಒಳಗೆ ಹಾಕಿದ್ದಾರೆ ಎಂದು ಹಣ್ಣು ಹಣ್ಣು ಮುದುಕಿ ನಿಂಗಮ್ಮ ಗೋಳಾಡುತ್ತಿದ್ದರು.
ಬೂಕನಕೆರೆ ಮಣ್ಣನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದಿದ್ದ ಸುಮಾರು 80 ಜನ ಯಡಿಯೂರಪ್ಪ ಅವರಿಗೆ ತವರುನೆಲ ಮಣ್ಣು ನೀಡಲು ಯೋಜಿಸಿದ್ದರು. ಆದರೆ ಆಸೆ ಕೈಗೂಡದೆ ನಿರಾಶೆಯಿಂದ ಬರಿಗೈಲಿ ವಾಪಾಸಾದರು.
ಈ ನಡುವೆ ಯಡಿಯೂರಪ್ಪ ಅವರ ಜಾಮೀನು ಅರ್ಜಿ ವಿಚಾರಣೆ ಅ.24ರಂದು ನಡೆಯಲಿದೆ. ಬೂಕನಕೆರೆ ಜನ ಮತ್ತೆ ಯಡಿಯೂರಪ್ಪ ಕಾಣಲು ಬರುವುದಾಗಿ ಹೇಳಿದ್ದಾರೆ.












Click it and Unblock the Notifications