ಗ್ಯಾಸ್ ಕನೆಕ್ಷನ್ ರದ್ದುಪಡಿಸುವುದಿಲ್ಲ: ಸಿಎಂ ಸದಾನಂದ ಗೌಡ ಸ್ಪಷ್ಟನೆ

ಆದರೆ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಸರಿಯಾಗಿ 2 ತಿಂಗಳ ಹಿಂದೆಯೂ ಡಿವಿಎಸ್ ನಮ್ಮ ಗೃಹಿಣಿಯರಿಗೆ ಇದೇ ರೀತಿಯ ಅಭಯವೊಂದನ್ನು ನೀಡಿದ್ದರು. 'ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಕೈತಪ್ಪುವ ಕಳವಳ ಬೇಡ. ಈಗಿರುವುದೆಲ್ಲ ಸದ್ಯಕ್ಕೆ ಸಕ್ರಮ ಸಂಪರ್ಕವೇ' ಎಂದು ಅಭಯ ನೀಡಿದ್ದರು. ಈಗ ಮತ್ತೆ...
ಪಡಿತರ ಚೀಟಿ ಇನ್ನಿತರ ದಾಖಲೆಗಳು ಸಮರ್ಪಕವಾಗಿಲ್ಲ ಎಂದು ಸಬೂಬು ಹೇಳಿ ರಾಜ್ಯಾದ್ಯಂತ ತಾತ್ಕಾಲಿಕವಾಗಿ ರದ್ದುಪಡಿಸಿರುವ ಅಡುಗೆ ಅನಿಲ ಸಂಪರ್ಕವನ್ನು ಮತ್ತೆ ಕಲ್ಪಿಸುವಂತೆ ಸಿಎಂ ಸದಾನಂದ ಗೌಡರು ಆಹಾರ ಇಲಾಖೆಗೆ ಬುಧವಾರ ಸೂಚನೆ ನೀಡಿದ್ದಾರೆ.
ಗ್ಯಾಸ್ ಕನೆಕ್ಷನ್ ಅಕ್ರಮ ಸಕ್ರಮ: ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ಬಹಳಷ್ಟು ಲೋಪದೋಷಗಳಾಗಿದ್ದು, ಇದನ್ನು ಸರಿಪಡಿಸುವವರೆಗೂ ಅಡುಗೆ ಅನಿಲ ಸಂಪರ್ಕವನ್ನು ಯಥಾಸ್ಥಿತಿಯಲ್ಲಿ ನೀಡಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.
ಪಡಿತರ ಚೀಟಿ, ವಿದ್ಯುತ್ನ ಆರ್.ಆರ್. ನಂಬರ್ ಮತ್ತಿತರ ದಾಖಲೆಗಳನ್ನು ಒದಗಿಸಿಲ್ಲ ಎಂಬ ಕಾರಣ ರಾಜ್ಯದ 24 ಲಕ್ಷ ಗ್ರಾಹಕರ ಅಡುಗೆ ಅನಿಲ ಸಂಪರ್ಕವನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಕೂಡಲೇ ಅಡುಗೆ ಅನಿಲವನ್ನು ಸರಬರಾಜು ಮಾಡುವಂತೆ ಸಿಎಂ ಸೂಚಿಸಿದರು.
ನಗರದ ನಾಗರಬಾವಿಯಲ್ಲಿನ ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಅಧಿಕಾರಿಗಳ ತಂಡ ನಿರ್ಮಿಸಿರುವ ತೆರಿಗೆ ಭವನ ಉದ್ಘಾಟನೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಡುಗೆ ಅನಿಲ ಸಂಪರ್ಕ ರದ್ದುಗೊಳಿಸಿರುವುದರಿಂದ ಬಡವರಿಗೆ ಬಹಳಷ್ಟು ಸಮಸ್ಯೆಗಳು ಉದ್ಭವವಾಗಿರುವುದನ್ನು ಮನಗಂಡು, ಅಡುಗೆ ಅನಿಲ ಸಂಪರ್ಕವನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.












Click it and Unblock the Notifications