ವಿದ್ಯುತ್ ಶಾಕ್ : ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ?
ಎಸ್ಕಾಮ್ ಕಂಪನಿಗೆ ರಾಜ್ಯ ಸರ್ಕಾರ ಕೊಡಬೇಕಿರುವ ಬಾಕಿ 12,000 ಕೋಟಿ ರೂಪಾಯಿಗಳು ಅನ್ನುತ್ತೆ ಮಾಧ್ಯಮ ವರದಿ.
* ವಿದ್ಯುತ್ ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿರುವಾಗಲೂ ರೈತರಿಗೆ ಉಚಿತ ವಿದ್ಯುತ್ ಅನ್ನುವ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬಿದ್ದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದು ಯಾಕೆ?
* ಹೋಗಲಿ, ಆಗಾಗ ವಿದ್ಯುತ್ ದರ ಏರಿಸುವುದನ್ನು ಬಿಟ್ಟು ಈ ಬಾಕಿ ತೀರಿಸಲು ಇನ್ಯಾವ ಕ್ರಮ ಕೈಗೊಂಡಿದ್ದೀರಿ?
*ತೆಲಂಗಾಣ ಹೋರಾಟದ ಸಕಲ ಜನುಲಾ ಸಮ್ಮೆ ಹೋರಾಟ ಶುರುವಾಗಿ 29 ದಿನಗಳಾದವು. ಈ ಸಮಸ್ಯೆ ಇಂತಹದೊಂದು ವಿಪರೀತಕ್ಕೆ ಹೋಗಬಹುದು ಅನ್ನುವ ಕೊಂಚ ಮುಂದಾಲೋಚನೆಯೂ ತಮಗೆ ಇಲ್ಲದಾಯಿತೇ?
* ಕಳೆದ 29 ದಿನಗಳಲ್ಲಿ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಕಲ್ಲಿದ್ದಲ್ಲಿನ ವ್ಯವಸ್ಥೆ ಕಲ್ಪಿಸಿಕೊಳ್ಳಲು ಯಾಕೆ ಮುಂದಾಗಲಿಲ್ಲ?
ಹೋಗಲಿ, ಸರ್ವ ಪಕ್ಷ ಸಭೆಗೆ ಪ್ರತಿಪಕ್ಷಗಳು ತಯಾರಿಲ್ಲ ಅಂದುಕೊಳ್ಳೊಣ, ತಮ್ಮ ಪಕ್ಷದ 19 ಜನ ಸಂಸತ್ ಸದಸ್ಯರಿದ್ದಾಗಲೂ ಅವರನ್ನೆಲ್ಲ ಸೇರಿಸಿ ದೆಹಲಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಯಾಕೆ ಮುಂದಾಗಿಲ್ಲ? ಕೇಂದ್ರವನ್ನು ದೂರುವುದು ಹೆಚ್ಚು ಸುಲಭ ಅನ್ನುವ ಕಾರಣಕ್ಕೊ?
* ಪರ್ಯಾಯ ಇಂಧನ ಬಳಕೆ, ವಿದ್ಯುತ್ ಉತ್ಪಾದನೆ, ಪೂರೈಕೆ ಬಗ್ಗೆ ಭಾಷಣ ಮಾಡುವ ಬದಲು ಕಾರ್ಯರೂಪಕ್ಕೆ ಏಕೆ ತರಬಾರದು. ಸೌರ ಶಕ್ತಿ ಸಾಧಕ ಸೆಲ್ಕೋ ಹರೀಶ್ ಹಂದೆ ನೆನಪು ಸರ್ಕಾರಕ್ಕಿಲ್ಲವೇ?