ಬಾವಿ ಪಾಳುಮನೆ ಹೊಲಗದ್ದೆಗಳಲ್ಲಿ ರೆಡ್ಡಿ ಸಂಪತ್ತು?

ಈ ರೀತಿಯ ಸುದ್ದಿಗೆ ಇಂಬು ನೀಡುವಂತೆ ನಾಲ್ವರು ನಿಧಿ ಚೋರರನ್ನು ಕೊಳಗಲ್ಲು ಸಮೀಪದ ಕೃಷ್ಣಾನಗರ ಗ್ರಾಮಸ್ಥರು ಬಂಧಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ನಿವಾಸಿ ಸಂತ ಥಾಮಸ್ ಸ್ಯಾಮ್ಯುಯೆಲ್ (39), ಕಡಪ ಜಿಲ್ಲೆಯ ಗಿದ್ದಲೂರು ನಿವಾಸಿಗಳಾದ ಸ್ವಾಮಿರಾವ್ (48), ಸುಬ್ಬಾರೆಡ್ಡಿ (39) ಮತ್ತು ಕೃಷ್ಣಾನಗರ ನಿವಾಸಿ ವಾಸು (30) ಬಂಧಿತರಾದವರು. ಮತ್ತೋರ್ವ ಆರೋಪಿ ಸಿಂಧನೂರು ನಿವಾಸಿ ಚಿನ್ನ ಅಲಿಯಾಸ್ ಶರಣಚೆನ್ನ ನಾಪತ್ತೆಯಾಗಿದ್ದಾನೆ.
ಸ್ವಾಮಿರಾವ್ ಮತ್ತು ಸುಬ್ಬಾರೆಡ್ಡಿ ಇಬ್ಬರೂ ನಿಧಿಶೋಧನೆಗಾಗಿ ಸಂತ ಥಾಮಸ್ ಸ್ಯಾಮ್ಯುಯಲ್ನನ್ನು ಸಂಪರ್ಕಿಸಿ ವಿಜಯದಶಮಿ ಹಬ್ಬದ ದಿನದಂದೇ ಕೃಷ್ಣಾನಗರಕ್ಕೆ ಆಗಮಿಸಿ, ತಾಳಿ, ವಿಭೂತಿ, ಕುಂಕಮ, ಅರಿಷಿಣ, ಸೀರೆ, ಟೆಂಗಿನಕಾಯಿ ಇನ್ನಿತರೆ ಸಾಮಗ್ರಿಗಳನ್ನು ಇರಿಸಿ ಪೂಜೆ ಪ್ರಾರಂಭ ಮಾಡುತ್ತಿದ್ದಂತೆಯೇ ಗ್ರಾಮಸ್ಥರು ಅನುಮಾನಗೊಂಡು ಇವರನ್ನು ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರು ಪೊಲೀಸರಿಗೆ ಅನೌಪಚಾರಿಕವಾಗಿ ನೀಡಿದ ಮಾಹಿತಿ ಪ್ರಕಾರ 'ಆಂಧ್ರ ಮತ್ತು ಕಡಪ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವಂತೆ ಬಳ್ಳಾರಿ ರೆಡ್ಡಿಗಳು ನಗದು ಮತ್ತು ಬಂಗಾರವನ್ನು ಬಳ್ಳಾರಿಯ ಕೆಲ ಗ್ರಾಮಗಳಲ್ಲಿ ನೆಲ ಅಗೆದು ಹೂಳಿಟ್ಟಿದ್ದಾರೆ. ಆ ನಿಧಿಯನ್ನು ಹುಡುಕಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸರು ಇವರ ವಿರುದ್ಧ ಕಳ್ಳತನ ಪ್ರಕರಣವನ್ನು ದಾಖಲಿಸಿದ್ದಾರೆ. ಶುಕ್ರವಾರ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.











Click it and Unblock the Notifications