ಸಂಗಣ್ಣಗೆ ಭರ್ಜರಿ ಗೆಲುವು, ಬಿಜೆಪಿ ಹುಳುಕು ಬಹಿರಂಗ

ಅಂತಿಮ ಫಲಿತಾಂಶದ ಪ್ರಕಾರ ಬಿಜೆಪಿ ಅಭ್ಯರ್ಥಿ ಸಂಗಣ್ಣ ಅವರಿಗೆ 60,405 ಮತಗಳು ಲಭಿಸಿದೆ. ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿ ಬಸವರಾಜ್ ಹಿಟ್ನಾಲ್ ಗೆ 47,919 ಮಾತ್ರ ಲಭಿಸಿದೆ.
ಎಲ್ಲೆಡೆ ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹದ ನಡುವೆ ಪಕ್ಷದ ನಾಯಕತ್ವ ವಿಚಾರದಲ್ಲಿನ ಹುಳುಕು ಎದ್ದು ಕಾಣಿಸಿದೆ. ಕೊಪ್ಪಳದಲ್ಲಿನ ವಿಜಯ ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಆದರೆ, ಇದು ನಮ್ಮ ನಾಯಕ ಯಡಿಯೂರಪ್ಪ ಅವರು ತಂದು ಕೊಟ್ಟ ಗೆಲುವು, ಸಾಮೂಹಿಕ ನಾಯಕತ್ವ ಎಲ್ಲವೂ ಸುಳ್ಳು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದರೂ ಇನ್ನೂ ತಮ್ಮ ವರ್ಚಸ್ಸು ಉಳಿಸಿಕೊಂಡಿರುವ ಯಡಿಯೂರಪ್ಪ ಸಂತಸದ ನಗೆ ಬೀರಿದ್ದಾರೆ. ಅವರ ವಿರೋಧಿ ಅನಂತ್ ಬಣದವರು ಗೆಲುವಿನ ನಗೆಯಲ್ಲಿ ವಿಷಾದದ ಛಾಯೆ ಆವರಿಸಿದೆ.
ಜೆಡಿಎಸ್ ಗೆ ಅಚ್ಚರಿ: ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನಕ್ಕೆ ಅನರ್ಹ ಎಂದು ಹೇಳಿಕೊಂಡು ತಿರುಗುತ್ತಿದ್ದ ಜೆಡಿಎಸ್ ಪಕ್ಷ ಕೊಪ್ಪಳದಲ್ಲಿ ನೆಲಕಚ್ಚಿದೆ. 20,719 ಮತಗಳನ್ನು ಮಾತ್ರ ಗಳಿಸಿದ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.
ಪರಮೇಶ್ವರ್ ಪ್ರತಿಕ್ರಿಯೆ: ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ ಆದರೆ, ಬಿಜೆಪಿಯಲ್ಲಿ ಇದ್ದಂತೆ ಹಣ ಬಲವಿಲ್ಲ. ಹಣಬಲದ ಮೇಲೆ ಕೊಪ್ಪಳದ ಜಯ ನಿರ್ಣಯವಾಗಿದೆ. ಪ್ರಜಾಪ್ರಭುತ್ವದ ತತ್ವಗಳನ್ನು ಬಿಜೆಪಿ ಗಾಳಿಗೆ ತೂರಿದೆ ಎಂದು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications