ಬೆಂಬಿಡದ ಭೂಕಂಪ ಭೂತ: ಮೃತರ ಸಂಖ್ಯೆ 40ಕ್ಕೆ
ಈ ಮಧ್ಯೆ ಸಿಕ್ಕಿಂನಲ್ಲಿ ರಕ್ಷಣಾ ಕಾರ್ಯಕ್ಕೆಂದು ತೆರಳಿದ್ದ ಬಸ್ಸೊಂದು ನಾಪತ್ತೆಯಾಗಿದೆ. ಇದರಲ್ಲಿ 50 ಮಂದಿ ಯೋಧರು ಇದ್ದರೆನ್ನಲಾಗಿದೆ. ಭೂಸ್ಖಲನದಿಂದ ಬಸ್ಸು ಪ್ರಪಾತಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭೂಕಂಪದ ಸಮ್ಮುಖದಲ್ಲಿ ಬಂಗಾಳದ ಉತ್ತರ ಭಾಗ, ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಚಲಿಸುವ ರೈಲುಗಳೆಲ್ಲವೂ ಗಂಟೆಗೆ 30ರಿಂದ 40 ಕಿ.ಮೀ. ವೇಗ ಮಿತಿಯಲ್ಲಿಯೇ ಸಾಗಬೇಕೆಂದು ರೈಲ್ವೆ ಇಲಾಖೆ ಆದೇಶಿಸಿದೆ.
ನಿನ್ನೆ ಸಂಜೆ ಸಭವಿಸಿದ ಭೂಕಂಪ ಸಿಕ್ಕಿಂನಿಂದ 50 ಕಿ.ಮೀ. ದೂರದಲ್ಲಿ ನೇಪಾಳದ ಗಡಿ ಬಳಿಯ ಮ್ಯಾಂಗಾನ್ ಮತ್ತು ಸಾಕ್ಯೋಂಗ್ ಪ್ರದೇಶದಲ್ಲಿ ಕೇಂದ್ರ ಬಿಂದು ದಾಖಲಿಸಿತ್ತು. ನೇಪಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳೇ ಅಲ್ಲದೆ ದೆಹಲಿ, ಲಖನೌ ಸೇರಿದಂತೆ ನೂರಾರು ಊರುಗಳಲ್ಲಿ ಭೂಮಿ ಕಂಪಿಸಿದ್ದು ಸಾವಿರಾರು ಮಂದಿ ಆತಂಕದಿಂದ ಮನೆಯಿಂದ ಹೊರಗೆ ಬಂದು ರಸ್ತೆಗಳಲ್ಲಿ ನಿಂತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಕಳೆದ 20 ವರ್ಷಗಳಲ್ಲಿ ಇದು ಗರಿಷ್ಠ ಪ್ರಮಾಣದ ಭೂಕಂಪ ಇದಾಗಿದೆ.
ಕಳೆದ ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಪ್ರಮಾಣದ ಭೂಕಂಪನ ಇದಾಗಿದೆ. ಸಿಕ್ಕಿಂನಲ್ಲಿ ಭಾನುವಾರ ಎರಡು ಸಲ ಭೂಮಿ ಕಂಪಿಸಿದ್ದು ಮೊದಲ ಬಾರಿಗೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ಇದ್ದರೆ, ಎರಡನೇ ಸಲ ಅದು 5.3ರಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ಖಚಿತ ಪಡಿಸಿವೆ.
ಅಸ್ಸಾಂ, ಮೇಘಾಲಯ, ತ್ರಿಪುರ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ತಾನ, ಚಂಡಿಗಡ, ದೆಹಲಿ ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳದ ಉತ್ತರ ಭಾಗದ ನೂರಾರು ಮನೆಗಳು ಕುಸಿದಿವೆ. ಆದರೆ ಗಾಯಾಳುಗಳ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.