ಗುಂತಕಲ್ಲಿನಲ್ಲಿ ಸಿಕ್ಕ ದುಡ್ಡು ಕಡಪಕ್ಯಾಕೆ ಹೋಗುತ್ತಿತ್ತು?

ಗುರುವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಮೇರೆಗೆ ಗುಂತಕಲ್ಲು ಪೊಲೀಸರು ಬಳ್ಳಾರಿಯಿಂದ ಕಡಪಕ್ಕೆ ಹೋಗುತ್ತಿದ್ದ ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ 4 ಬ್ಯಾಗ್ಗಳಲ್ಲಿದ್ದ 4 ಕೋಟಿ 95 ಲಕ್ಷ ರೂಪಾಯಿಗಳನ್ನು ಪತ್ತೆ ಮಾಡಿದ್ದರು.
ಈ ಸಂದರ್ಭದಲ್ಲಿ ಪೊದ್ದಟೂರು ನಿವಾಸಿಗಳಾದ ಲಾರಿ ಮಾಲೀಕ/ಚಾಲಕ ವೆಂಕಟರಾಮಿ ರೆಡ್ಡಿ ಮತ್ತು ಈತನ ಸ್ನೇಹಿತ ಈಶ್ವರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದರು. ಈ ಮಾಹಿತಿ ಪಡೆದ ಬಳ್ಳಾರಿಯಲ್ಲೇ ಇದ್ದ ಸಿಬಿಐ ಅಧಿಕಾರಿಗಳು ಗುಂತಕಲ್ಲುಗೆ ತೆರಳಿ ಬಂಧಿತರನ್ನು ಇಡೀ ರಾತ್ರಿ ವಿಚಾರಣೆ ಮಾಡಿ ಹಣದ ಮೂಲಗಳನ್ನು ತಿಳಿದಿದ್ದಾರೆ ಎನ್ನಲಾಗಿದೆ.
ಸಿಬಿಐ ಕಸ್ಟಡಿಯಲ್ಲಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿಯ ಪತ್ನಿ ಪ್ರಸ್ತುತ ಕಡಪದಲ್ಲಿದ್ದು, ಈ ಹಣವನ್ನು ಕಡಪಕ್ಕೆ ಸಾಗಿಸುತ್ತಿರುವುದಾಗಿ ಬಂಧಿತರು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಡಪದಲ್ಲಿ ಈ ಲಾರಿ ಚಾಲಕನನ್ನು ಸಂಪರ್ಕಿಸುವ ಮೊಬೈಲ್ ಸಂಖ್ಯೆಯನ್ನು ಕೂಡ ಸಿಬಿಐ ತೆಗೆದುಕೊಂಡು ಆ ಸಂಖ್ಯೆಯ ವಿವಿರಗಳನ್ನು ಸಂಗ್ರಹಿಸುತ್ತಿದೆ.
ಗುಂತಕಲ್ಲು ನ್ಯಾಯಾಲಯದ ನ್ಯಾಯಾಧೀಶರು ರಜೆಯ ಮೇಲೆ ಹೋಗಿರುವ ಕಾರಣ ಬಂಧಿತರನ್ನು ಉರವಕೊಂಡ ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications