ಬಳ್ಳಾರಿಯಿಂದ ಲಾರಿಯಲ್ಲಿ ಸಾಗಿಸುತ್ತಿದ್ದ 3.85 ಕೋಟಿ ರು. ವಶ

ವಿಚಾರಣೆಗೆ ಒಳಪಟ್ಟವರು ಬಳ್ಳಾರಿ ನಿವಾಸಿ, ಆಂಧ್ರ ನೋಂದಣಿಯ (ಎಪಿ 04, ಎಕ್ಸ್ 9009) ಲಾರಿಯ ಮಾಲೀಕ ಮತ್ತು ಚಾಲಕ ವೆಂಕಟರಾಮರೆಡ್ಡಿ (40) ಮತ್ತು ಪೊದ್ದಟೂರು ನಿವಾಸಿ ಈಶ್ವರರೆಡ್ಡಿ. ಇವರು ಗುಂತಕಲ್ಲು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ನಾವುಗಳು ಹೈವೇನಲ್ಲಿ ನಿಂತಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಇಬ್ಬರು ನಮಗೆ ಈ ಬ್ಯಾಗ್ ನೀಡಿ ಹೈದರಾಬಾದ್ಗೆ ಈ ಬ್ಯಾಗ್ ತಲುಪಿಸಿ. ಅಲ್ಲಿ ಶ್ರೀನಿವಾಸರೆಡ್ಡಿ ಎನ್ನುವವರು ಬ್ಯಾಗ್ ಪಡೆದು 20,000 ರೂಪಾಯಿ ನೀಡುತ್ತಾರೆ ಎಂದು ತಿಳಿಸಿದ ಕಾರಣ ಈ ಬ್ಯಾಗ್ ತಂದಿದ್ದೇವೆ. ಬ್ಯಾಗ್ನಲ್ಲಿ ಏನಿದೆ ಎನ್ನುವ ಮಾಹಿತಿ ನಮಗಿಲ್ಲ ಎಂದು ಇಬ್ಬರೂ ಪೊಲೀಸರಿಗೆ ತಿಳಿಸಿದ್ದಾರೆ.
ಈ ಅಕ್ರಮ ಸಾಗಾಟದ ತನಿಖೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ಗುಂತಕಲ್ಲು ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಕಬ್ಬಿಣದ ಅದಿರು ಸಾಗಿಸುವ ನೆಪದಲ್ಲಿ ಈ ರೀತಿ ಹಣ ಸಾಗಿಸುವುದು ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗಳು ಮೊದಲಿನಿಂದ ನಡೆಸಿಕೊಂಡು ಬಂದಿರುವ ದಂಧೆ ಎಂಬುದು ಪೊಲೀಸರ ಹೇಳಿಕೆ.
ಬಳ್ಳಾರಿಯ ನಿವಾಸಿಯೋರ್ವರು ಗುಂತಕಲ್ಲು ಪೊಲೀಸರಿಗೆ ಮತ್ತು ಅನಂತಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ, ಲಾರಿ ಸಂಖ್ಯೆಯನ್ನು ನೀಡಿ ನೂರಾರು ಕೋಟಿ ರೂಪಾಯಿ ಅಕ್ರಮವಾಗಿ ಹೈದರಾಬಾದ್ ಸೇರುತ್ತಿರುವ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಲಾರಿಯನ್ನು ತಡೆದು, ಹಣವನ್ನು ಪತ್ತೆ ಮಾಡಿದ್ದಾರೆ.












Click it and Unblock the Notifications