ಅಧಿಕಾರದಲ್ಲಿ ಇನ್ನೆಷ್ಟು ದಿನ : ಡಿವಿಎಸ್ ವಿಷಾದ ಗೀತೆ
ಈ ವಿಷಾದದ, ರಾಜಕೀಯ ವಿರಹದ ಮಾತುಗಳನ್ನಾಡಿದವರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ. ಖಾಸಗಿ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತ, ತಮ್ಮ ಮನದಾಳದ ನೋವು ತಳಮಳಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಈ ಮಾತು ಅಚ್ಚರಿ ತರುವುದಿಲ್ಲ.
ಕೊಪ್ಪಳ ಚುನಾವಣೆಯನ್ನು ಗೆಲ್ಲಲು ಯಡಿಯೂರಪ್ಪನವರೇ ಬೇಕು, ಸದಾನಂದ ಗೌಡರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎಂದು ಡಿಬಿ ಚಂದ್ರೇಗೌಡ ಅವರು ಹೇಳಿರುವ ಸಂದರ್ಭದಲ್ಲಿಯೇ ಸದಾನಂದ ಗೌಡ ಈ ವಿಷಾದಭರಿತ ಮಾತುಗಳನ್ನು ಆಡಿದ್ದಾರೆ. ಯಡಿಯೂರಪ್ಪ ಮಾಜಿಯಾಗಿದ್ದರೂ ಅವರ ಮಾತು ಇನ್ನೂ ನಡೆಯುತ್ತದೆ ಎಂಬುದಕ್ಕೆ ಆ ಘಟನೆಗಳೇ ಪುಷ್ಟಿ ನೀಡಿವೆ.
ಅಧಿಕಾರವನ್ನು ಕಳೆದುಕೊಳ್ಳುವ ಹಿಂದಿನ ದಿನ ಸರಕಾರಿ ಅಧಿಕಾರಗಳೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ, 'ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೇನ್ರೀ' ಎಂದು ಯಡಿಯೂರಪ್ಪ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಂತರದ ದಿನಗಳಲ್ಲಿ, ನಾನು ಯಡಿಯೂರಪ್ಪನವರ ಪಪೆಟ್ ಅಲ್ಲ ನನಗೂ ಸ್ವತಂತ್ರ ವ್ಯಕ್ತಿತ್ವವಿದೆ ಎಂದು ಡಿವಿಎಸ್ ಹೇಳಿದ್ದರು.