ಫಾರೂಕ್ ದಯಾಮರಣಕ್ಕೆ ಯಾರೆಲ್ಲ ಮಸಲತ್ತು ನಡೆಸಿದ್ದಾರೆ?

'ಘಟನೆ ನಡೆದ ದಿನದಿಂದಲೇ, ಬೆಂಗಳೂರು ಡಿಸಿಪಿ (ಕೇಂದ್ರ) ರಮೇಶ್ ಅವರು ತಮ್ಮ ಸಿಬ್ಬಂದಿಯಾದ ಎಸಿಪಿ ಓಂಕಾರಯ್ಯ ಮತ್ತು ಇತರೆ ಇನ್ಸ್ಪೆಕ್ಟರ್ ಮತ್ತು ಸಬ್ಇನ್ಸ್ಪೆಕ್ಟರ್ ಮೂಲಕ ಹಿಂಸಿಸುತ್ತಿದ್ದಾರೆ. ಇವರೆಲ್ಲ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ, ಆಸ್ತಿ-ಪಾಸ್ತಿಗಳ ಹಾನಿಗೂ ಯತ್ನಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹನುಮಂತಯ್ಯ, ಎಸ್ಐ ರಾಘವೇಂದ್ರ, ಹೆಡ್ ಕಾನ್ಸ್ಟೇಬಲ್ ಕಲಾನರಸಯ್ಯ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.
ಉಲ್ಲಂಘನೆ: ನನ್ನ ಮತ್ತು ನನ್ನ ಕುಟುಂಬದ ಪ್ರಾಣ ಮತ್ತು ಆಸ್ತಿಗೆ ರಕ್ಷಣೆ ನೀಡಬೇಕು ಎಂದು ಗೃಹ ಇಲಾಖೆ ಕಾರ್ಯದರ್ಶಿ ಮತ್ತು ನಗರ ಪೊಲೀಸರಿಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಲಂಚ ಪ್ರಕರಣದಲ್ಲಿ ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ನುಡಿಯುವಂತೆ, ರಮೇಶ್ ಮತ್ತು ಓಂಕಾರಯ್ಯ ಹಾಗೂ ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು ನನ್ನ ಮೇಲೆ ಒತ್ತಡ ಹೇರುತ್ತಿದ್ದು ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯನ್ನು ಅಪಹರಿಸಿ ಹಲವು ಬಾರಿ ಹಿಂಸಿಸಿ ಆತನಿಗೂ ಅಭಿಯೋಜನೆಗೆ ವಿರುದ್ಧ ಸಾಕ್ಷಿ ನುಡಿಯುಂತೆ ಒತ್ತಾಯಿಸಲಾಗಿದೆ ಎಂದು ಅವರು ದೂರಿದ್ದಾರೆ.
ಸಾಕಾಗಿದೆ: ಈ ಎಲ್ಲ ಆರೋಪಿಗಳಿಂದ ಹಿಂಸೆ ಅನುಭವಿಸಿ ನನಗೆ ಸಾಕಾಗಿದೆ. ಬದುಕು ಬೇಡವೆನಿಸಿದೆ. ಸುಳ್ಳು ಸಾಕ್ಷಿ ನುಡಿಯುವುದು,ಆರೋಪಿಗಳ ಕೈಯಲ್ಲಿ ಸಾಯುವುದಕ್ಕಿಂತಲೂ ಪ್ರಾಣ ಬಿಡುವುದೇ ಲೇಸೆನಿಸಿದೆ. ಇವರೆಲ್ಲರೂ ನೀಡಿದ ಹಿಂಸೆಯ ಪರಿಣಾಮವಾಗಿ ನನ್ನ ತಾಯಿ ಸತ್ತರು. ನನ್ನ ತಂದೆ ಮೆದುಳು ರಕ್ತಸ್ರಾವಕ್ಕೆ ತುತ್ತಾದರು. ನನ್ನ ಮನೆ ಸದಸ್ಯರೂ ಕಿರುಕುಳ ಅನುಭವಿಸಿದರು ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಭಾವ ಬಳಕೆ:ಪ್ರಕರಣದ ಕುರಿತು ಹೆಚ್ಚು ಆಸಕ್ತಿ ತೋರದಂತೆ ಈ ಹಿಂದಿನ ಲೋಕಾಯುಕ್ತ ನ್ಯಾಯಾಧೀಶರ ಮೇಲೂ ಈ ಆರೋಪಿಗಳು ಪ್ರಭಾವ ಬೀರಿದ್ದರು. ಜಾಮೀನು ನಿರಾಕರಿಸಲು ಕೋರಿ ಎರಡು ಬಾರಿ ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸಿದರೂ, ಹಿಂದಿನ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಲು ಕಡಿಮೆ ಆಸಕ್ತಿ ತೋರಿಸಿದರು.
ಶಾಸಕರ ಪರವಾಗಿಯೇ ಪ್ರಕರಣ ಕೊನೆಗೊಳ್ಳುವ ಸಾಧ್ಯತೆಯೂ ಇತ್ತು. ಆದರೆ ಆಗ ಲೋಕಾಯುಕ್ತರಾಗಿದ್ದ ಸಂತೋಷ ಹೆಗ್ಡೆ ಮತ್ತು ಲೋಕಾಯುಕ್ತ ಎಸ್ಪಿ ಆಗಿದ್ದ ಮಧುಕರಶೆಟ್ಟಿ ಅವರುಆಸಕ್ತಿ ತೋರಿದ್ದರಿಂದ ಪ್ರಕರಣ ಮುಂದುವರಿದಿದೆ ಎಂದು ಫಾರೂಕ್ ವಿವರಿಸಿದ್ದಾರೆ.
ಮನವಿಪತ್ರದ ಪ್ರತಿಗಳನ್ನು ಸುಪ್ರೀಂ ಕೋರ್ಟ್, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ರಿಜಿಸ್ಟ್ರಾರ್ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಧೀಶರಿಗೂ ಸಲ್ಲಿಸಿದ್ದಾರೆ.












Click it and Unblock the Notifications