ಗೌರಿ ಹಬ್ಬಕ್ಕೆ ಬರಬೇಕಾದವಳು ಮಸಣ ಸೇರಿದಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಪತಿ ಹಾಗೂ ಅತ್ತೆಯನ್ನು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಜರ್ಬಾದ್ನಲ್ಲಿ ಪ್ರಾವಿಷನ್ ಸ್ಟೋರ್ ನಡೆಸುತ್ತಿರುವ ರಾಜೀವ್ ಎಂಬಾತನ ಪತ್ನಿ ದಿವ್ಯಾ ಹಾಗೂ ಮಗು ತನುಶ್ರೀ ಎಂಬುವರೇ ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಅರಕಲಗೂಡಿನ ನಿವಾಸಿ ಶ್ರೀನಿವಾಸ್ ಎಂಬುವರ ಪುತ್ರಿ ದಿವ್ಯಾಳನ್ನು ನಜರ್ಬಾದ್ನ ರಾಜೀವ್ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದನು. ಮದುವೆಯ ಸಂದರ್ಭ ಒಂದು ಲಕ್ಷ ರೂಪಾಯಿ, 100 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ಪಡೆದಿದ್ದ. ಕೆಲವು ಸಮಯಗಳ ಕಾಲ ಮಾತ್ರ ಹೆಂಡತಿಯೊಂದಿಗೆ ಚೆನ್ನಾಗಿದ್ದ ರಾಜೀವ್ ಬಳಿಕ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನು.
ಮಗಳ ಭವಿಷ್ಯದ ದೃಷ್ಟಿಯಿಂದ ಶ್ರೀನಿವಾಸ ಅವರು ಕೂಡ ಆಗಾಗ್ಗೆ ಹಣವನ್ನು ನೀಡಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ರಾಜೀವ್ ಅಂಗಡಿಗೆ ಬಂಡವಾಳ ಹಾಕಲು ಒಂದು ಲಕ್ಷ ರೂಪಾಯಿ ಅವಶ್ಯಕತೆಯಿದ್ದು ಅದನ್ನು ತವರಿಂದ ತಂದು ಕೊಡುವಂತೆ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಈ ನಡುವೆ ಮಗಳ ಮನೆಗೆ ಬಂದಿದ್ದ ಶ್ರೀನಿವಾಸ್ರವರು ಗೌರಿ ಹಬ್ಬಕ್ಕೆ ಮಗಳು ಹಾಗೂ ಮೊಮ್ಮಗುವನ್ನು ಕಳುಹಿಸಿಕೊಡುವಂತೆ ಅಳಿಯ ರಾಜೀವ್ನೊಂದಿಗೆ ಹೇಳಿ ಹೋಗಿದ್ದರು. ಆದರೆ ಬುಧವಾರ ಗೌರಿ ಹಬ್ಬಕ್ಕೆ ತವರಿಗೆ ಹೋಗಬೇಕಾಗಿದ್ದ ದಿವ್ಯಾ ಮಗುವಿನೊಂದಿಗೆ ಸೀಮೆಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಿಗ್ಗೆ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ರಾಜೀವ ದಿವ್ಯಾಳ ಪೋಷಕರಿಗೆ ತಿಳಿಸಿದ.
ಮೈಸೂರಿಗೆ ಆಗಮಿಸಿದ ಪೋಷಕರು ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಆಕೆಯನ್ನು ಸೀಮೆಣ್ಣೆ ಸುರಿದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರಲ್ಲದೆ, ನಜರ್ಬಾದ್ ಠಾಣೆ ಪೊಲೀಸರಿಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಪೊಲೀಸರು ಪತಿ ರಾಜೀವ್ ಹಾಗೂ ಅತ್ತೆ ವಿಜಯಲಕ್ಷ್ಮಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.











Click it and Unblock the Notifications