ರಾಮಲೀಲಾ ಮೈದಾನದಿಂದ ಆಸ್ಪತ್ರೆಗೆ ಅಣ್ಣಾ
ನವದೆಹಲಿ, ಆ.28: ಕಳೆದ ಹನ್ನೆರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ದೈಹಿಕವಾಗಿ ಇನ್ನೂ ಸಮರ್ಥರಿರುವುದು ವೈದ್ಯರಿಗೆ ಅಚ್ಚರಿ ಮೂಡಿಸಿದೆ. ಆದರೂ, ಅಣ್ಣಾ ಅವರನ್ನು ಮೈದಾನದಿಂದ ನೇರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲು ಟೀಂ ಅಣ್ಣಾ ನಿರ್ಧರಿಸಿದೆ.
ಸುಮಾರು 291 ಗಂಟೆಗಳ ಕಾಲ ಉಪವಾಸ ಮಾಡಿದ 74 ವರ್ಷದ ಅಣ್ಣಾ ಅವರ ದೇಹ ತೂಕ 7.5 ಕೆ.ಜಿಯಷ್ಟು ಇಳಿದಿದೆ. ಹೃದಯ ಬಡಿತ ಸ್ವಲ್ಪ ಹೆಚ್ಚಾಗಿದ್ದರೂ, ಬಿಪಿ ನಾರ್ಮಲ್ ಇದೆ. ಅಣ್ಣಾ ಅವರನ್ನು ಹರ್ಯಾಣದ ಗುರ್ ಗಾವ್ ನಲ್ಲಿರುವ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಟೀಂ ಅಣ್ಣಾ ಹೇಳಿದೆ.
ಆದರೆ, ರಾಮಲೀಲಾ ಮೈದಾನದಿಂದ ನೇರವಾಗಿ ರಾಜ್ ಘಾಟ್ ಗೆ ತೆರಳಿ ಬಾಪೂ ಸಮಾಧಿಗೆ ನಮನ ಸಲ್ಲಿಸುವ ಇಚ್ಛೆಯನ್ನು ಅಣ್ಣಾ ವ್ಯಕ್ತಪಡಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಕನಿಷ್ಠ ಎರಡು ದಿನವಾದರೂ ಅಣ್ಣಾ ಅವರಿಗೆ ವಿಶ್ರಾಂತಿ ಪಡೆಯಲಿ ಎಂದು ಟೀಂ ಅಣ್ಣಾ ಬಯಸಿದೆ.
12 ದಿನಗಳ ಕಾಲ ಕೇವಲ ನೀರನ್ನಷ್ಟೇ ಕುಡಿದು ವ್ಯಕ್ತಿಯೊಬ್ಬ ಇಷ್ಟು ಸದೃಢನಾಗಿರಲು ಸಾಧ್ಯವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅವರ ಲವಲವಿಕೆ, ಸ್ಪಷ್ಟಬಾಗಿ ಭಾಷಣ ಮಾಡುವ ವೈಖರಿ ಎಲ್ಲರಿಗೂ ಪ್ರೇರಣೆ ನೀಡುತ್ತಿದೆ.
ಅತಿ ಕಡಿಮೆ ಕೆಲೊರಿ ಆಹಾರವನ್ನು ಸೇವಿಸುವ ಅಭ್ಯಾಸ ರೂಢಿಸಿಕೊಂಡು, ನಿರಂತರವಾಗಿ ದೈಹಿಕ ಕಸರತ್ತು, ಯೋಗ, ಪ್ರಾಣಾಯಾಮ ಅಭ್ಯಾಸ ನಿರತರಾದವರಿಗೆ ಮಾತ್ರ ಈ ರೀತಿ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾ ಅವರ ಮನೋಸಂಕಲ್ಪ ದೊಡ್ಡದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications