ವಿಕ್ಟೋರಿಯಾ ಆಸ್ಪತ್ರೆಗೆ ಕಟ್ಟಾ ಸುಬ್ರಮಣ್ಯ ದಾಖಲು

ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನ ವಿರೋಧಿಸಿ ಕಟ್ಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರು ನಡೆಸಿದರು. ಕಟ್ಟಾ ಜಗದೀಶ್, ಶ್ರೀನಿವಾಸ್ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, 14 ದಿನಗಳವರೆಗೆ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಸೆ.5ರಂದು ನಡೆಯುವುದರಿಂದ ಕಟ್ಟಾ ಅಂಡ್ ಸನ್ ಈ ಬಾರಿ ಜೈಲಿನಲ್ಲೇ ಗಣೇಶ ಹಬ್ಬ ಆಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಆಸ್ಪತ್ರೆಯಲ್ಲಿ ಕಟ್ಟಾ : ಈ ಮಧ್ಯೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಇಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲು ನೋವು ಎಂದು ನೆನ್ನೆ ಇಡೀ ದಿನ ಗೋಳಾಡುತ್ತಿದ್ದ ಕಟ್ಟಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ನಂತರ ಇದ್ದಕ್ಕಿದ್ದಂತೆ ಹೊಟ್ಟೆನೋವು ಎಂದು ಕಟ್ಟಾ ಅವರನ್ನುವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಆ.8 ರಿಂದ ಜೈಲಿನಲ್ಲಿರುವ ಕಟ್ಟಾ ಅಂಡ ಸನ್ ಗೆ ಫುಡ್, ಬೆಡ್, ಮೆಡಿಸನ್ ಎಲ್ಲವೂ ಮನೆಯಿಂದಲೇ ಸರಬರಾಜು ಆಗುತ್ತಿದೆ. ಮಧುಮೇಹದಿಂದ ಬಳಲುತ್ತಿರುವ ಕಟ್ಟಾ ಅವರು ಮಾರ್ನಿಂಗ್, ಇವನಿಂಗ್ ವಾಕ್ ಮಾಡುವುದನ್ನು ತಪ್ಪಿಸಿರಲಿಲ್ಲ ಎಂದು ಜೈಲ್ಲು ಅಧಿಕಾರಿ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಹೂಡಿದ್ದ ನಾಲ್ವರು ಖೈದಿಗಳನ್ನು ಸಹಾ ಆಸ್ಪತ್ರೆಗೆ ಸೇರಿಸಲಾಗಿದೆ. ಹೊಟ್ಟೆಗೆ ಆಹಾರವಿಲ್ಲದೆ ನಿತ್ರಾಣರಾಗಿದ್ದ ಇವರಿಗೂ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications