ಪ್ರಧಾನಿ ಹೊರಗಾಗಲಿ, ನೋ ಪ್ರಾಬ್ಲಂ ಎಂದ ಸಂತೋಷ ಹೆಗ್ಡೆ

ದೆಹಲಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸಂತೋಷ್ ಅವರು ತಮ್ಮಈ 'ವೈಯಕ್ತಿಕ ಅಭಿಪ್ರಾಯ'ವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ಸದ್ಯೋಭವಿಷ್ಯತ್ ನಲ್ಲಿ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಅವರನ್ನು ರಕ್ಷಿಸುವ ಸಲುವಾಗಿ ಪ್ರಧಾನಿಯನ್ನು ಜನಲೋಕಪಾಲ ಕಾಯಿದೆ ವ್ಯಾಪ್ತಿಗೆ ತರಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ಆದಾಗ್ಯೂ ತಕ್ಷಣಕ್ಕೆ ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಟ್ಟೇ ಕೆಲಸ ಸಾಧಿಸುವುದನ್ನು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನ್ಯಾ. ಸಂತೋಷ್ ಹೆಗ್ಡೆ ಅವರ ಅಭಿಪ್ರಾಯ ವಿವೇಕದಿಂದ ಕೂಡಿದೆ ಎಂದು ಭ್ರಷ್ಟಾಚಾರ ವಿರೋಧಿಗಳು ಪ್ರತಿಕ್ರಿಯಿಸಿದ್ದಾರೆ.
'ಆದಷ್ಟು ಬೇಗ ಮಸೂದೆ ಜಾರಿಯಾಗಬೇಕೆಂಬುದು ನನ್ನ ಉದ್ದೇಶ. ಕಾಯ್ದೆಯಲ್ಲಿ ಪ್ರಧಾನಿ ಮತ್ತು ನ್ಯಾಯಾಧೀಶರನ್ನು ಸೇರಿಸಲು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ. ಅದನ್ನು ಹೊರತುಪಡಿಸಿಯೂ ಸಹ ಕಾಯ್ದೆ ಜಾರಿಯಾಗಬೇಕು. ಇದರಿಂದ ಕೇಂದ್ರದ ಎಲ್ಲ ಸಚಿವರು, ಸಂಸದರು, ಎಲ್ಲ ಅಧಿಕಾರಿಗಳು ಒಳಪಡುತ್ತಾರೆ. ಅಷ್ಟರ ಮಟ್ಟಿಗೆ ಇದೊಂದು ಸಾಧನೆಯೇ ಆಗುತ್ತದೆ. ಬರುವ ದಿನಗಳಲ್ಲಿ ಪ್ರಧಾನಿ ಹಾಗೂ ನ್ಯಾಯಾಧೀಶರನ್ನು ಈ ಕಾಯ್ದೆಯಲ್ಲಿ ಸೇರಿಸುವಂತೆ ಒತ್ತಾಯಿಸಬಹುದಾಗಿದೆ' ಎಂದು ಅವರು ಹೇಳಿದ್ದಾರೆ.
'ದೇಶದಲ್ಲಿ ಭ್ರಷ್ಟಾಚಾರವೇ ಇಲ್ಲ ಅಥವಾ ಭ್ರಷ್ಟಾಚಾರವನ್ನು ನಿರ್ಲಕ್ಷಿಸಿ ಎಂದು ಯಾರಾದರೂ ಹೇಳಲು ಸಾಧ್ಯವೆ? 42 ವರ್ಷಗಳಿಂದ ದೇಶವು ಲೋಕಪಾಲರಿಗಾಗಿ ಕಾಯುತ್ತಿದೆ. ನಿವೃತ್ತಿಯ ಅನಂತರ ಉಳಿದ ದಿನಗಳನ್ನು ಮನೆಯಲ್ಲೇ ಕಳೆಯಬೇಕೆಂದು ಆಲೋಚಿಸಿದ್ದೆ. ಅಣ್ಣಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ ನೀಡಿದ ಬಳಿಕ 72ರ ಹರೆಯದಲ್ಲೂ ದುಡಿಯುತ್ತಿದ್ದೇನೆ. ಎಷ್ಟೇ ದಿನಗಳಾದರೂ ಬೇಡಿಕೆ ಈಡೇರುವ ತನಕ ಅಣ್ಣಾ ಬೆಂಬಲಕ್ಕಿದ್ದೇವೆ' ಎಂದೂ ಅವರು ಸ್ಪಷ್ಟಪಡಿಸಿದರು.












Click it and Unblock the Notifications