ಅಣ್ಣಾ ಸಂಕಟ: ಕಾಂಗ್ರೆಸ್ ಗೆ ಕೈ ಕೊಟ್ಟ ರಾಹುಲ್

ಅಷ್ಟೇ ಅಲ್ಲದೆ ಅಣ್ಣಾ ಬಂಧನ ನಂತರ ಮಧ್ಯರಾತ್ರಿ ಬಿಡುಗಡೆ ಮಾಡುವಂತೆ ಸೂಚಿಸಿ ಮರೆಯಾದ ರಾಹುಲ್, ಆ ನಂತರ ಅಣ್ಣಾ ಬಗ್ಗೆ ತುಟಿ ಬಿಚ್ಚಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ರಾಹುಲ್ ಏನು ಗಿಳಿಯಲ್ಲ, ಅವಶ್ಯಕತೆ ಇದ್ದಾಗ ಮಾತ್ರ ಮಾತಾಡುತ್ತಾರೆ ಎಂದು ರೇಣುಕಾ ಚೌಧುರಿ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.
ರಾಹುಲ್ ರನ್ನು ಪ್ರಧಾನಿ ಪಟ್ಟಕ್ಕೇರಿಸುವ ಬಗ್ಗೆ ಮಾತುಕತೆ ಜೊರಾಗಿ ನಡೆದಿರುವ ಸಂದರ್ಭದಲ್ಲಿ ರಾಹುಲ್ ಈ ರೀತಿ ಕೈ ಚೆಲ್ಲಿ ದೂರ ನಿಂತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಸೋನಿಯಾ ಎಲ್ಲಿ?: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ(?) ಸೋನಿಯಾ ಗಾಂಧಿ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾರತದಲ್ಲಿ ಅಣ್ಣಾ ಹೋರಾಟದ ವಿರುದ್ಧ ತಡೆಗೋಡೆ ಒಡ್ಡಲು ನಾಲ್ಕು ಜನರ ಉನ್ನತ ಮಟ್ಟದ ಸಮಿತಿ ನೇಮಿಸಿದ್ದರು.
ರಾಹುಲ್ ಈ ಸಮಿತಿಯನ್ನು ಬಳಸಿಕೊಂಡು ಅಣ್ಣಾ ಅವರ ಸಮಸ್ಯೆಯನ್ನು ಬಗೆಹರಿಸುವ ನಿರೀಕ್ಷೆ ಇತ್ತು. ಆದರೆ, ರಾಹುಲ್ ವಿಫಲರಾಗಿದ್ದಾರೆ. ಪಕ್ಷದಲ್ಲಿ ಸೋನಿಯಾ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಅಸಲಿಗೆ ಸೋನಿಯಾ ಎಲ್ಲಿದ್ದಾರೆ? ಹೇಗಿದ್ದಾರೆ? ಹುಷಾರಾಗಿದ್ದರೆ ಏಕೆ ಅಣ್ಣಾ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ? ಸೋನಿಯಾ ಬಗ್ಗೆ ಎಲ್ಲಾ ಮಾಹಿತಿಯನ್ನು ಗುಪ್ತವಾಗಿ ಇರಿಸಲಾಗಿದೆ.
ಚಾಲೆಂಜ್ ತೆಗೆದುಕೊಳ್ಳದಿದ್ದರೆ ಆತ ಲೀಡರ್ ಆಗಲು ಹೇಗೆ ಸಾಧ್ಯ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಸರ್ಕಾರ ಸಮಸ್ಯೆಯ ಸುಳಿಯಲ್ಲಿರುವಾಗ ಧೈರ್ಯವಾಗಿ, ಜಾಣತನದಿಂದ ರಾಜತಾಂತ್ರಿಕತೆ ಮೆರೆಯಬೇಕು ಸಾರ್ವಜನಿಕರ ಒಲವು ಗಳಿಸಬೇಕು ಆದರೆ, ರಾಹುಲ್ ಏಕೆ ಹಿಂದೇಟು ಹಾಕುತ್ತಿದ್ದಾರೆ ತಿಳಿಯುತ್ತಿಲ್ಲ.
ರಾಹುಲ್ ಗೆ ಮುಖಭಂಗ: ಗ್ರಾಮ ಪಂಚಾಯಿತಿಗಳ ಉದ್ಧಾರ, ಜನರತ್ತ ನಡಿಗೆ ಆರಂಭಿಸಿರುವ ರಾಹುಲ್ ಗೆ ಪುಣೆ ಕಾಂಗ್ರೆಸ್ ನಾಯಕರು ಸಾಥ್ ನೀಡದೆ ಅಚ್ಚರಿ ಮೂಡಿಸಿದ್ದಾರೆ. ಪುಣೆ ರೈತರ ಮೇಲೆ ಗೋಲಿಬಾರ್ ನಡೆದ ಮೇಲೆ ಇದು ರಾಹುಲ್ ಅವರ ಮೊದಲ ಭೇಟಿಯಾಗಿದೆ.
ರಾಹುಲ್ ಲೀಡರ್ ಆಗಲು ಸಾಧ್ಯವೇ? : ಮೊದಲಿಗೆ , ಪಕ್ಷದ ಹಿರಿಯ ನಾಯಕರೊಡನೆ ಸಮಾಲೋಚನೆ ನಡೆಸಬೇಕು. ನಂತರ ಅಣ್ಣಾ ತಂಡದೊಡನೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಬೇಕು. ಇದರ ಫಲಾಫಲ ಏನೇ ಆದರೂ, ಜನಾನುರಾಗಿ ನಾಯಕ ಎಂಬ ಪಟ್ಟವನ್ನು ಪಡೆಯಲು ರಾಹುಲ್ ಗೆ ಉತ್ತಮ ಅವಕಾಶ ಸಿಗುತ್ತದೆ.
ಆದರೆ, ಅಣ್ಣಾ ಅವರನ್ನು ಎದುರಿಸುವ ಧೈರ್ಯ ರಾಹುಲ್ ಗಿದೆಯೇ? ಜನ ಲೋಕಪಾಲ್ ಮಸೂದೆ ಮಂಡಿಸುವುದಿರಲಿ, ಈ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ಕಾರ್ಯಕ್ರಮ ಏನಾದರೂ ಹಮ್ಮಿಕೊಳ್ಳುವ ಧೈರ್ಯ ಕಾಂಗ್ರೆಸ್ ಮಾಡುತ್ತದೆಯೇ? ವಿಪತ್ತು ಬಂದಾಗ ದೂರ ಉಳಿದು, ಪ್ರಧಾನಿ ಕುರ್ಚಿ ಸಿಕ್ಕಾಗ ಛಂಗನೆ ಹಾರಿ ಕುಳಿತರೆ ಎಲ್ಲರಂತಲ್ಲ ನಮ್ಮ ರಾಹುಲ ಎಂಬ ಕಾಂಗ್ರೆಸ್ಸಿಗರ ಹೊಗಳಿಕೆಯ ಮಾತಿಗೆ ಅರ್ಥವಿರುವುದಿಲ್ಲ.












Click it and Unblock the Notifications