ಕರ್ನಾಟಕದ ಮೂಲೆಮೂಲೆಗಳಲ್ಲಿ ಅಣ್ಣಾಗೆ ಭಾರೀ ಬೆಂಬಲ

ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕ್ಯಾ. ಗೋಪಿನಾಥ್ ಸೇರಿದಂತೆ ಹಲವಾರು ಗಣ್ಯರು ಹಚ್ಚಿಸಿದ ಹೋರಾಟದ ಕಿಡಿ ಇಂದು ರಾಜ್ಯದೆಲ್ಲೆಡೆ ವ್ಯಾಪಿಸಿದೆ.
ಪ್ರಬಲ ಜನ ಲೋಕಪಾಲ್ ವಿಧೇಯಕಕ್ಕಾಗಿ ಆಗ್ರಹಿಸಿ, ಅಣ್ಣಾ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ 8 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.
ಕರಾವಳಿ ಹಾಗೂ ಮಲೆನಾಡು ಪ್ರದೇಶ: ದಕ್ಷಿಣ ಕನ್ನಡ ಭ್ರಷ್ಟಾಚಾರಿ ವಿರೋಧಿ ಸಂಘಟನೆ ನೇತೃತ್ವದಲ್ಲಿ 40ಕ್ಕೂ ಅಧಿಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಮದೇವ ಶೆಣೈ ಅವರ ವೀರನುಡಿಗಳನ್ನು ಕೇಳಲು ಅಸಂಖ್ಯಾತ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
ಉಡುಪಿಯಲ್ಲಿ ನಾಗರಿಕ ಸಮಿತಿಯಡಿಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆ ತೊರೆದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಾರ್ಕಳದಲ್ಲಿ 200ಕ್ಕೂ ಅಧಿಕ ಜನ ಪಡುಬಿದ್ರಿ ಕಾರ್ಕಳ ಹೆದ್ದಾರಿ ರಸ್ತೆ ತಡೆ ನಡೆದು, ಸ್ವಾತಂತ್ರ್ಯ ಗೀತೆಗಳನ್ನು ಹಾಡುತ್ತಾ, ಅಣ್ಣಾಗೆ ಬೆಂಬಲ ಸೂಚಿಸಿದರು.
ಕಾರವಾರದಲ್ಲಿ 23ಕ್ಕೂ ಅಧಿಕ ಸ್ವಯಂ ಸೇವಾ ಸಂಸ್ಥೆಗಳು, ವಕೀಲರು, ವಿದ್ಯಾರ್ಥಿಗಳು, ಪರಿಸರ ತಜ್ಞರು, ಉದ್ಯಮಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿ/ನಿಯರು ಪಾಲ್ಗೊಂಡಿದ್ದರು. ಚಿಕ್ಕಮಗಳೂರು ನಗರದ ಶಾಲಾ ಕಾಲೇಜುಗಳಲ್ಲಿ ಅಘೋಷಿತ ಬಂದ್ ಆಚರಿಸಿ, ಅಣ್ಣಾಗೆ ಬೆಂಬಲ ವ್ಯಕ್ತಪಡಿಸಲಾಯಿತು.
ಮೈಸೂರು, ಕೋಲಾರ ಬೆಲ್ಟ್: ಐತಿಹಾಸಿಕ ಗೋಪುರ ಗಡಿಯಾರದ ಗಾಂಧಿ ವೃತ್ತದ ಬಳಿ ಸೇರಿದ 200ಕ್ಕೂ ಅಧಿಕ ಸಾಮಾಜಿಕ ಕಾರ್ಯಕರ್ತರು, ಅಣ್ಣಾಗೆ ಬೆಂಬಲ ಸೂಚಿಸಿದರು.
ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಬಿಜಾಪುರ, ಬೆಳಗಾವಿಯಲ್ಲೂ ಅಣ್ಣಾ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನಾ ಮೆರವಣಿಗೆ, ಯುಪಿಎ ಸರ್ಕಾರ ವಿರುದ್ಧ ಘೋಷಣೆಗಳು ಕೇಳಿ ಬಂದವು.












Click it and Unblock the Notifications