ಬಿಬಿಎಂಪಿ ಬಜೆಟ್ ಮಂಡನೆಗೆ ವರಮಹಾಲಕ್ಷ್ಮಿ ಅಡ್ಡಿ
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಬೆಂಗಳೂರಿಗೆ ಬಂದ ತಕ್ಷಣ ಬಿಬಿಎಂಪಿ ಬಜೆಟ್ ಮಂಡನೆ ಬಗ್ಗೆ ಚರ್ಚಿಸಲಾಗುವುದು. ಆ.11ರ ಬದಲಾಗಿ ಆ.18ರಂದು ಬಜೆಟ್ ಮಂಡಿಸಲಾಗುತ್ತದೆ ಎಂದು ಉಪಮೇಯರ್ ಹರೀಶ್ ಹೇಳಿದ್ದಾರೆ.
ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷರು, ಆಯುಕ್ತರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಯವರಿಗೆ ಪಾಲಿಕೆಯ ಹಣಕಾಸಿನ ಸ್ಥಿತಿಗತಿ ಕುರಿತು ಮನವರಿಕೆ ಮಾಡಿಕೊಡಲಿದೆ.
ಬಜೆಟ್ ಮಂಡನೆ ನಂತರ ಮೂರು ದಿನಗಳ ಕಾಲ ಚರ್ಚೆ ನಡೆಯಬೇಕಾಗುತ್ತದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆ ದಿನವೂ ಮಹಿಳಾ ಸದಸ್ಯರು ಭಾಗವಹಿಸುವುದು ಅನುಮಾನ. ಆಗಸ್ಟ್ 13 ಎರಡನೇ ಶನಿವಾರ, ಆಗಸ್ಟ್ 14 ಭಾನುವಾರ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ. ಹೀಗಾಗಿ 18ರ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹರೀಶ್ ಹೇಳಿದರು.
ರಸ್ತೆ ಅಭಿವೃದ್ಧಿಗೆ ಆದ್ಯತೆ: ಕರ್ನಾಟಕ ಪುರಸಭೆ ಕಾಯಿದೆ ಅನ್ವಯ ಸರಿಯಾದ ಸಮಯಕ್ಕೆ ಬಜೆಟ್ ಮಂಡಿಸುತ್ತಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ಹರೀಶ್ ಅಲ್ಲಗೆಳೆದಿದ್ದಾರೆ. ಈ ಬಾರಿಯೂ ಪ್ರಗತಿಪರ ಬಜೆಟ್ ಅನ್ನು ಮಂಡಿಸಲಿದ್ದೇವೆ. ಬೆಂಗಳೂರಿನ ರಸ್ತೆ ರಿಪೇರಿ, ಡಾಂಬರೀಕರಣ, ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬೇಡಲಾಗಿದೆ ಎಂದರು.