ವರಮಹಾಲಕ್ಷ್ಮಿ ವ್ರತಕ್ಕೆ ಅಮ್ಮ ಸುಷ್ಮಾ ಸ್ವರಾಜ್ ಬರ್ತಿಲ್ಲ
ಗಣಿ ಧಣಿಗಳ ವಿಶೇಷ ಹೆಲಿಕಾಪ್ಟರಿನಲ್ಲಿ ಬಂದು ತವರು ಬಾಗಿನ ತೆಗೆದುಕೊಂಡೂ ಹೋಗುತ್ತಿದ್ದ ತುಂಬು ಮುತ್ತೈದೆ ಆಶೀರ್ವಾದ ಸಿಗದಿರುವುದು ಮಹಾ ಅಪಶಕುನ ಎಂದು ರೆಡ್ಡಿಗಳು ಭಾವಿಸಿದ್ದಾರೆ. ಸುಷ್ಮಾಜೀ ಅವರ ಮನ ಓಲೈಸಿ ಬಳ್ಳಾರಿಗೆ ಕರೆಸಿಕೊಳ್ಳುವ ಸರ್ವ ಪ್ರಯತ್ನಗಳು ನಡೆದಿದೆ. ಆದರೆ, ವೈಯಕ್ತಿಕ ಕಾರಣಗಳಿಂದ ಈ ಬಾರಿ ಬಳ್ಳಾರಿಗೆ ಬರಲಾಗುವುದಿಲ್ಲ ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ.
ಲೋಕಾಯುಕ್ತ ಗಣಿವರದಿಯಲ್ಲಿ ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ಅವರ ಸಹವಾಸ ಸಾಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಸುಷ್ಮಾ ನಿರ್ಧರಿಸಿದ್ದಂತಿದೆ.
ಪ್ರತಿ ವರ್ಷ ಶ್ರಾವಣದಲ್ಲಿ ಬಳ್ಳಾರಿಯ ಹೃದ್ರೋಗ ತಜ್ಞ ಡಾ ಶ್ರೀನಿವಾಸಮೂರ್ತಿ ಮನೆಯಲ್ಲಿ ನಡೆಯುವ ವರಮಹಾಲಕ್ಷ್ಮಿ ವ್ರತದಲ್ಲಿ ಪಾಲ್ಗೊಳ್ಳಲು ಸುಷ್ಮಾ ಬರುತ್ತಿದ್ದರು. ರೆಡ್ಡಿ ಸಹೋದರರಿಗೆ ನಾನು ಗಾಡ್ ಮದರ್ ಅಲ್ಲಾ ಯಡಿಯೂರಪ್ಪ ಸಂಪುಟ ಸೇರಿಸಲು ನಾನೇನು ಒತ್ತಡ ಹೇರಿರಲಿಲ್ಲ ಎಂದು ಸುಷ್ಮಾ ಇತ್ತೀಚೆಗೆ ಹೇಳಿದ್ದರು.
ಇತ್ತ ಕ್ರಿಮಿನಲ್ ಕೇಸ್ ಭಯ ಅತ್ತ ಮಂತ್ರಿ ಪದವಿ ಕಳೆದುಕೊಳ್ಳುವ ಭೀತಿ ನಡುವೆ ಮಹಾಲಕ್ಷ್ಮಿ ಎಂತಿರುವ ಸುಷ್ಮಾ ತಾಯಿಯ ಕೃಪೆಯಿಂದ ಕೂಡಾ ವಂಚಿತರಾಗುತ್ತಿರುವ ರೆಡ್ಡಿ ಸೋದರರಿಗೆ ಇದು ಕೇಡುಗಾಲ ಎನ್ನಬಹುದು.