ಕೆಆರ್ಎಸ್ ಭರ್ತಿಗೆ 2 ಅಡಿ ಮಾತ್ರ ಬಾಕಿ

ಸುಮಾರು 124.85 ಅಡಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಈಗಾಗಲೇ 122 ಅಡಿಯಷ್ಟು ನೀರು ತುಂಬಿದ್ದು ನೀರಿನ ಒಳಹರಿವು ಇದೇ ರೀತಿ ಮುಂದುವರೆದರೆ ಇನ್ನೆರಡು ದಿನದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಈಗಾಗಲೇ ಅಣೆಕಟ್ಟಿಗೆ ಸುಮಾರು 32.599 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದಾಗಿ ಅಣೆಕಟ್ಟಿನಿಂದ 20.353 ಕ್ಯೂಸೆಕ್ಸ್ ನೀರನ್ನು 20 ಕ್ರಸ್ಟ್ ಗೇಟುಗಳ ಮೂಲಕ ಹರಿದು ಬಿಡಲಾಗುತ್ತಿದೆ.
ರಂಗನತಿಟ್ಟಿನಲ್ಲಿ ಬೋಟಿಂಗ್ ಸ್ಥಗಿತ : ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ನದಿಪಾತ್ರದ ಗ್ರಾಮಗಳ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ನ್ನು ಕೂಡ ಸ್ಥಗಿತಗೊಳಿಸಲಾಗಿದೆ. ರಂಗನತಿಟ್ಟಿನ ಕಾವೇರಿ ನದಿ ದಡದಲ್ಲಿರುವ ಮರಗಳಲ್ಲಿ ಪಕ್ಷಿಗಳು ಬೀಡು ಬಿಟ್ಟಿದ್ದು, ಸಂತಾನೋತ್ಪತ್ತಿಯಲ್ಲಿ ತೊಡಗಿವೆ. ಹಾಗಾಗಿ ಅಣೆಕಟ್ಟು ಭರ್ತಿಯಾಗಿ ಒಳಹರಿವು ಹೆಚ್ಚಿದ್ದೇ ಆದರೆ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡುವುದು ಅನಿವಾರ್ಯವಾಗುತ್ತದೆ.
ಈ ಸಂದರ್ಭ ಪ್ರವಾಹ ಕಾಣಿಸಿಕೊಂಡು ಪಕ್ಷಿಗಳು ಕೊಚ್ಚಿ ಹೋಗುವ ಸಾಧ್ಯತೆಯಿದೆ. ಎರಡು ವರ್ಷದ ಹಿಂದೆ ಪ್ರವಾಹ ಬಂದು ಪಕ್ಷಿಗಳು ಕೊಚ್ಚಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಣೆಕಟ್ಟಿನಿಂದ ನದಿಗೆ ನೀರು ಬಿಡುತ್ತಿರುವುದರಿಂದ ಕಾವೇರಿ ನದಿ ಶ್ರೀರಂಗಪಟ್ಟಣದಲ್ಲಿ ಉಕ್ಕಿ ಹರಿಯುತ್ತಿರುವ ಕಾರಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಕಲ್ಪಿಸಲಾಗಿದ್ದ ಬೋಟಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿಲ್ಲ.
ಮುಖ್ಯಮಂತ್ರಿಗಳಿಂದ ಬಾಗಿನ : ಪ್ರತಿವರ್ಷವೂ ಜಲಾಶಯ ಭರ್ತಿಯಾದ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸಿ ಬಾಗಿನ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಇನ್ನು ಕೆಲವೇ ದಿನದಲ್ಲಿ ಜಲಾಶಯ ಭರ್ತಿಯಾಗುವ ಲಕ್ಷಣವಿದ್ದು, ನೂತನ ಮುಖ್ಯಮಂತ್ರಿ ಸದಾನಂದ ಗೌಡರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಪತ್ನಿ ಡಾಟಿ ಉರ್ಫ್ ಜಯಲಕ್ಷ್ಮಿ ಸಮೇತ ಕೆಆರ್ಎಸ್ಗೆ ಬಾಗಿನ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.












Click it and Unblock the Notifications