ವಾಸ್ತು ದೋಷಮುಕ್ತ ಅನುಗ್ರಹದಲ್ಲಿ 2 ವರ್ಷವೂ 'ಸದಾನಂದ'

ನೂತನ ಮುಖ್ಯಮಂತ್ರಿ ಡಿವಿಎಸ್ ಗುರುವಾರ 'ಅನುಗ್ರಹ'ಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು, ಅಧಿಕೃತ ನಿವಾಸದಲ್ಲಿಯೇ ವಾಸವಾಗಿದ್ದಾರೆ. ಸದಾನಂದ ಗೌಡರ ಪತ್ನಿ ಡಾಟಿ (ಜಯಲಕ್ಷ್ಮಿ), ಪುತ್ರ ಕಾರ್ತಿಕ್ ಮತ್ತು ಕುಟುಂಬದ ಇತರ ಸದಸ್ಯರೂ ಸಾಥ್ ನೀಡಿದ್ದಾರೆ. ಇದರಿಂದ ತಮ್ಮ ಕುಟುಂಬದ ಶಾಂತಿ, ನೆಮ್ಮದಿಗೆ ಭಂಗ ಬಂದರೆ ಅಥವಾ ಅಧಿಕಾರ ಕಳೆದುಕೊಂಡರೆ ಅದಕ್ಕೆ ಪಕ್ಷವೇ ಹೊಣೆಯಾದೀತು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
ವಾಸ್ತು ದೋಷ ನಿವಾರಣೆಗಾಗಿ ಆಗಸ್ಟ್ 4ರ ಬೆಳಗ್ಗೆ 8 ಗಂಟೆಗೆ 'ಅನುಗ್ರಹ'ದಲ್ಲಿ ಸಕಲ ಪೂಜಾ ಕೈಂಕರ್ಯಗಳು ನೆರವೇರಿದವು. ಶಿವಗಂಗಾ ಸೋಮಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ನಾಲ್ವರು ಅರ್ಚಕರು ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು. ಬೆಳಿಗ್ಗೆ 8ರಿಂದ 10.30ರವರೆಗೆ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತುಹೋಮ ಮತ್ತು ಮನೆ ದೇವರಾದ ಲಕ್ಷ್ಮಿವೆಂಕಟೇಶ್ವರ ಸ್ವಾಮಿಯ ಪೂಜೆ ನಡೆಯಿತು. ಗಣಪತಿ ಹೋಮದ ನಂತರ ಸದಾನಂದಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿದರು. ಹೀಗಾಗಿ ಉಳಿದ ಪೂಜಾ ಕಾರ್ಯಗಳು ಅವರ ಅಣ್ಣ ಶಿವರಾಮ ಗೌಡ, ಅತ್ತಿಗೆ ಸುನಂದಾ ಅವರ ನೇತೃತ್ವದಲ್ಲಿ ನಡೆಯಿತು.
ಮೂರು ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಾಸ್ತುಗೆ ಅನುಗುಣವಾಗಿ ಅನುಗ್ರಹವನ್ನು ನವೀಕರಿಸಲಾಗಿತ್ತು. ಆದರೆ ಅನುಗ್ರಹದಲ್ಲಿ ವಾಸ ಮಾಡಿದರೆ ಐದು ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬ ನಂಬಿಕೆ ಇರುವುದರಿಂದ, ಯಡಿಯೂರಪ್ಪ 'ಅನುಗ್ರಹ'ಕ್ಕೆ ವಾಸ್ತವ್ಯ ಬದಲಾಯಿಸದೆ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿಯೇ ಉಳಿದರು.
ಯಡಿಯೂರಪ್ಪ ಅನುಗ್ರಹಕ್ಕೆ ಹೋಗದ ಕಾರಣ, ಡಾ.ವಿ.ಎಸ್.ಆಚಾರ್ಯ ಅವರಿಗೆ 'ಅನುಗ್ರಹ'ವನ್ನು ಹಂಚಿಕೆ ಮಾಡಲಾಯಿತು. ಒಂದು ವಾರ ಅಲ್ಲಿ ನೆಲೆಸಿದ್ದ ಅವರು, ತಮಗೆ ಆ ಬಂಗಲೆ ಸರಿ ಬರುವುದಿಲ್ಲ ಎಂದು ನೆಪವೊಡ್ಡಿ ವಾಸ್ತವ್ಯ ಬದಲಾಯಿಸಿದರು. ಆಗಿನಿಂದ ಅನುಗ್ರಹದಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ.












Click it and Unblock the Notifications