ಒಂದೇ ಏಟಿಗೆ ಎರಡು ಹಕ್ಕಿ, ಯಡ್ಡಿ ಜೊತೆಗೆ ಬೇಬಿಗೂ ಶಾಸ್ತಿ

ಪ್ರತಿ ಸಂಪುಟ ಸಭೆ ನಂತರ ಸುದ್ದಿಗಾರರ ಮುಂದೆ ಶೋಭಾ ಅವರು ಮೈಕ್ ಹಿಡಿದು ಕುಂತಾಗಲೇ ಪಕ್ಷದ ಹಿತಶತ್ರುಗಳು ಚುರುಕಾದರು. ಈಕೆಯ ವೇಗ ನೋಡಿದರೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ಹಾಗೆ ಇದೆ. ಚಿಗುರಿನಲ್ಲೇ ಹೊಸಕಿ ಹಾಕಬೇಕು ಎಂದು ಯಡಿಯೂರಪ್ಪ ವಿರೋಧಿ ನಾಯಕರು ನಿರ್ಧರಿಸಿದರು. ಶೋಭಾ ಸಂಪುಟದಿಂದ ಹೊರಕ್ಕೆ ಹೋಗಿದ್ದು, ಬೇಡದ ಖಾತೆ ಲಭಿಸಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಸಿಎಂ ರೇಸ್ ನಿಂದ ಆಕೆಯನ್ನು ಹೊರಕ್ಕಿಟ್ಟಿದ್ದು ಇದೇ ಗುಂಪು ಎನ್ನಲಾಗಿದೆ.
ಶೋಭಾಗೆ ಭವಿಷ್ಯದ ಅರಿವಿದೆ:ಯಡಿಯೂರಪ್ಪ ಅವರ ಕಷ್ಟಕಾಲದಲ್ಲಿ ಹೆಗಲಿಗೆ ಹೆಗಲು ಕೊಟ್ಟ ಶೋಭಾ ಎಂದೂ ಪಕ್ಷದ ಹಿತಾಸಕ್ತಿಯನ್ನು ಬಲಿ ಕೊಡಲಿಲ್ಲ ಎಂಬುದು ವಿಶೇಷ. ಯಡಿಯೂರಪ್ಪ ರಾಜೀನಾಮೆ ಬಳಿಕ ನೂತನವಾಗಿ ಆಯ್ಕೆಯಾಗುವ ಮುಖ್ಯಮಂತ್ರಿ ಖಂಡಿತವಾಗಿಯೂ ತನ್ನನ್ನು ಸಂಪುಟದೊಳಗೆ ಸೇರಿಸಿಕೊಳ್ಳಲು ಇಚ್ಚಿಸಲಾರರು ಎಂಬುದು ಶೋಭಾ ಅವರಿಗೆ ಆಗಲೇ ಮನದಟ್ಟಾಗಿದೆ.
ಆದರೆ, ಏಕೈಕ ಮಹಿಳಾ ಸಚಿವೆಯಾಗಿ ಸಂಪುಟದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವುದರಿಂದ ಯಾವುದಾದರೂ ಬೇಡದ ಖಾತೆಗೆ ತನ್ನನ್ನು ನೇಮಿಸುವ ಸಾಧ್ಯತೆಯನ್ನು ಶೋಭಾ ಬಲ್ಲರು.
"ಯಡಿಯೂರಪ್ಪ ನನ್ನ ನಾಯಕ. ಅವರ ಕೈಕೆಳಗೆ ಮಾತ್ರ ನಾನು ಕೆಲಸ ಮಾಡುತ್ತೇನೆ. ಇತರರ ಅಡಿಯಾಳಾಗಿ ಕೆಲಸ ಮಾಡಲು ನನಗೆ ಒಂಚೂರೂ ಇಷ್ಟವಿಲ್ಲ" ಎಂದು ಶೋಭಾ ಆಂಗ್ಲ ದೈನಿಕದೊಡನೆ ಮಾತನಾಡುತ್ತಾ ಹೇಳಿದ್ದಾರೆ.
ಶೋಭಾ ಬಲಿಪಶು: 2009ರಲ್ಲಿ ರೆಡ್ಡಿಗಳ ಕಾರಣದಿಂದ ಶೋಭಾ ಸಂಪುಟದಿಂದ ನಿರ್ಗಮಿಸಿದ್ದರು. ಆದರೆ, ನಂತರ ರೆಡ್ಡಿಗಳ ಅಮ್ಮ ಸುಷ್ಮಾ ಸ್ವರಾಜ್ ಅವರ ಸಂಧಾನದಿಂದ ಶೋಭಾ, ಶಾಂತ ಹಾಗೂ ರೆಡ್ಡಿ ಸೋದರರ ಯುದ್ಧ ಸುಖಾಂತ್ಯ ಕಂಡಿತ್ತು. ಶಾಂತಾ ಹಾಗೂ ಶೋಭಾ ಒಟ್ಟಿಗೆ ಕೂತು ವರಮಹಾಲಕ್ಷ್ಮಿಗೆ ಆರತಿ ಬೆಳಗಿದ್ದರು. ಈಗ ನೂತನ ಸಚಿವ ಸಂಪುಟಕ್ಕೆ ಶೋಭಾ ಸೇರಲು ರೆಡ್ಡಿಗಳು ವಿರೋಧಿಸುತ್ತಿಲ್ಲ. ಆದರೆ, ಮೊದಲಿನಿಂದಲೂ ಶೋಭಾ ಅವರ ನೆರಳು ಮೆಟ್ಟಿದರೆ ಆಗದ ಒಬ್ಬ ನಾಯಕರು ಸಂಪುಟ ಸೇರ್ಪಡೆಗೆ ಅಡ್ಡಗಾಲು ಹಾಕುವ ಸಾಧ್ಯತೆಯಿದೆ.
ಬೆಳಗದ ಕರ್ನಾಟಕ: ಪಂಚಾಯತ್ ರಾಜ್ ಬದಲಾಗಿ ಇಂಧನ ಖಾತೆ ಲಭಿಸಿತ್ತು. ರಾಜ್ಯದ ವಿದ್ಯುತ್ ಕ್ಷಾಮವನ್ನು ಬದಲಿಸಲು ಛತ್ತೀಸ್ ಗಢ, ಪರ್ಯಾಯ ವಿದ್ಯುತ್ ಉತ್ಪಾದನೆಯತ್ತ ಗಮನ ಹರಿಸಿದ ಶೋಭಾ ಭರವಸೆ ಮೂಡಿಸಿದರು. ಆದರೆ, ಅಕ್ರಮ ಎಲ್ ಪಿಜಿ ಗ್ಯಾಸ್ ವಿತರಕರನ್ನು ಹಿಡಿಯುವ ಬರದಲ್ಲಿ ಅನ್ಯಾಯವಾಗಿ ಜನತೆಯ ವಿರೋಧ ಕಟ್ಟಿಕೊಂಡರು.
ಯಡಿಯೂರಪ್ಪ ಇಲ್ಲದೆ ಬೇಡದ ಖಾತೆಯಲ್ಲಿ ಇರುವುದಕ್ಕಿಂತ 'ಬ್ಯಾಕ್ ಟು ಬೇಸಿಕ್' ಎಂಬಂತೆ ತನ್ನ ಎಂದಿನ ಸಮಾಜಮುಖಿ ಕೆಲಸ ಗಳಾದ ಎಂಡೋಸಲ್ಫಾನ್, ಮಂಗಳಮುಖಿಯರಿಗೆ ಹಕ್ಕು, ನೆರೆ ಸಂತ್ರಸ್ತರಿಗೆ ಪರಿಹಾರ ಮುಂತಾದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ಏನಾದರೂ ಸಮರ್ಥ ಸಚಿವೆಯನ್ನು ಕಳೆದುಕೊಳ್ಳಲು ಕರ್ನಾಟಕದ ಜನತೆ ಕೂಡಾ ಇಷ್ಟಪಡುವುದಿಲ್ಲ.












Click it and Unblock the Notifications