ಯಡ್ಡಿ ನೆತ್ತಿ ಮೇಲೆ ಕ್ರಿಮಿನಲ್ ಕೇಸ್ ತೂಗುಕತ್ತಿ
ಈಗಾಗಲೇ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ವಕೀಲರು ಹಾಕಿರುವ ಕ್ರಿಮಿನಲ್ ಮೊಕದ್ದಮೆ ಕಾಟದಿಂದ ಯಡಿಯೂರಪ್ಪ ಬಳಲಿದ್ದಾರೆ. ಈಗ ಮತ್ತೊಂದು ಕೇಸ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ತಪ್ಪಿಸಲು ಇಲ್ಲದ ತಂತ್ರಗಳನ್ನು ಹೂಡುತ್ತಿದ್ದಾರೆ.
ತಾವು ಸೂಚಿಸುವ ಅಭ್ಯರ್ಥಿ ಸಿಎಂ ಆಗಬೇಕು ಎನ್ನುವುದು ಮೊದಲನೇ ತಂತ್ರ. ಇಂದು ಇನ್ನೊಂದು ತಂತ್ರ ಪ್ರಯೋಗವೂ ನಡೆಯಿತು. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ ಅವರು ಲೋಕಾಯುಕ್ತ ಕಚೇರಿಗೆ ತೆರಳಿ ಅರ್ಧ ಗಂಟೆ ಮಾತುಕತೆ ನಡೆಸಿ, ಹೊರ ಬಂದರು.
ಯಡಿಯೂರಪ್ಪ ಅವರು ತುಂಬಾ ಸಾತ್ವಿಕ ಮನೋಭಾವದ ವ್ಯಕ್ತಿ. ಅವರನ್ನು ಅನಗತ್ಯವಾಗಿ ಹಗರಣದಲ್ಲಿ ಸಿಲುಕಿಸಲಾಗಿದೆ. ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಅವರ ಹೆಸರು ಸೂಚಿಸಿರುವುದನ್ನು ಮರು ಪರಿಶೀಲಿಸಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಪುಟ್ಟಸ್ವಾಮಿ ಹೇಳಿದರು.
ಕ್ರಿಮಿನಲ್ ಕೇಸ್ ತೂಗುಕತ್ತಿ: ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಖಟ್ಲೆಗೆ ರಾಜ್ಯಪಾಲರು ಅನುಮತಿ ನೀಡಲು ಮುಂದಾಗಿದ್ದಾರೆ. ಕೇಂದ್ರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳಿಸಲಾಗಿದ್ದು, ಗೃಹ ಸಚಿವ ಪಿ ಚಿದಂಬರಂ ಅನುಮೋದನೆ ನೀಡಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಲೋಕಾಯುಕ್ತರ ಶಿಫಾರಸ್ಸಿನಂತೆ ಯಡಿಯೂರಪ್ಪ ಮತ್ತು ಮೂವರು ಮಂತ್ರಿಗಳನ್ನು ಬಂಧನಕ್ಕೊಳಪಡಿಸಿ ಅವರ ವಿರುದ್ಧ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಒಂದು ತಿಂಗಳ ಸಮಯವಿದೆ.
ಈ ನಡುವೆ 'ನಾನು ಸೂಪರ್ ಸಿಎಂ ಆಗಲ್ಲ' ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಡಿವಿ ಸದಾನಂದಗೌಡ ಅವರನ್ನು ಕೈಗೊಂಬೆ ಮಾಡಿಕೊಂಡು ಯಡಿಯೂರಪ್ಪ ಮತ್ತೆ ರಾಜ್ಯವನ್ನು ಆಳುತ್ತಾರೆ ಎಂಬ ಕೂಗು ಎದ್ದಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯಿಸಿದ್ದಾರೆ.