ಕೋರ್ಟ್ ಆಜ್ಞೆ ಧಿಕ್ಕರಿಸಿ ಅಕ್ರಮ ಅದಿರು ಸಾಗಣೆ

ಸರ್ಕಾರಿ ಸ್ವಾಮ್ಯದ ಎನ್ಎಂಡಿಸಿಯಿಂದ ತೋರಣಗಲ್ಲುನ ಜಿಂದಾಲ್ ಉಕ್ಕು ಕಾರ್ಖಾನೆಗೆ ರವಾನೆ ಆಗಿದ್ದ ಒಂದು ರೇಕ್ (59 ಡಬ್ಬಾಗಳು) ಮತ್ತು 138 ಲಾರಿಗಳಲ್ಲಿ ಸಾಗಾಣಿಕೆಯಾಗಿದ್ದ ಅದಿರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಖರೀದಿ ಕಂಪನಿ ಮತ್ತು ಮಾರಾಟ ಮಾಡಿದ ಕಂಪನಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಜುಲೈ 29ರಂದು ರಾತ್ರಿ ಎನ್ಎಂಡಿಸಿ ರೈಲ್ವೆಯಾರ್ಡ್ನಲ್ಲಿ ರೇಕ್ಗೆ ಲೋಡಾಗಿದ್ದ ಕಬ್ಬಿಣದ ಅದಿರು ಜುಲೈ 30ರ ಬೆಳಗ್ಗೆ ಜಿಂದಾಲ್ ಕಂಪನಿಯನ್ನು ಸೇರಿತ್ತು. ಈ ಹಿನ್ನೆಲೆಯಲ್ಲಿ ಈ ಅದಿರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಜುಲೈ 29ರ ರಾತ್ರಿ 138 ಲಾರಿಗಳಲ್ಲಿ ಎನ್ಎಂಡಿಸಿಯಿಂದ ರವಾನೆ ಆಗಿದ್ದ ಕಬ್ಬಿಣದ ಅದಿರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಶಂಕರ್, ಜಿಲ್ಲೆಯಲ್ಲಿ 124 ಗಣಿಗಳಿವೆ. ಈ ಗಣಿಗಳ ಪೈಕಿ ಕೇವಲ 10-15 ಗಣಿಗಳ ಚಟುವಟಿಕೆಗಳು ಮಾತ್ರ ನಡೆಯುತ್ತಿವೆ. ಗಣಿಗಾರಿಕೆ ನಡೆಯುತ್ತಿರುವ ಕಂಪನಿಗಳು ಮತ್ತು ಟ್ರೇಡರ್ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಅನಧಿಕೃತ ಅದಿರು ರವಾನೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಉಕ್ಕು ಮತ್ತು ಮೆದು ಕಬ್ಬಿಣ ತಯಾರಿಕಾ ಘಟಕಗಳು ತುಮಕೂರು - ಚಿತ್ರದುರ್ಗಗಳಿಂದ ಕೂಡ ಕಬ್ಬಿಣದ ಅದಿರನ್ನು ಖರೀದಿ ಮಾಡುತ್ತಿವೆ. ಹೀಗಾಗಿ ಕೆಲವೊಮ್ಮೆ ಅದಿರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಆದರೂ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿಕೊಂಡು ಜಿಲ್ಲೆಯ ಅದಿರು ರವಾನೆ ತಡೆಯಲಾಗುತ್ತಿದೆ ಎಂದರು.












Click it and Unblock the Notifications