ಯಾದಗಿರಿ ಗಡ್ಡಿ ಗ್ರಾಮಸ್ಥರು ಇನ್ನೂ ನಡುಗಡ್ಡೆಯಲ್ಲಿ
ಗ್ರಾಮದಲ್ಲಿರುವ ಜನರಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಗುಲಬರ್ಗಾದಿಂದ 5 ಜನರ ಡಿಆರ್ ಪೊಲೀಸರ ತಂಡ, ಒಂದು ಬೋಟ್ ತರಿಸಲಾಗಿತ್ತಾದರೂ, ನೀರಿನಲ್ಲಿ ಪ್ರವಾಹ ಹೆಚ್ಚಿದ್ದರಿಂದ ಬೋಟ್ ಅರ್ಧಕ್ಕೇ ಹಿಂದಿರುಗಿ ಬಂದಿದೆ. ಪ್ರವಾಹ ಇಳಿಮುಖವಾಗುತ್ತಿದ್ದಂತೆ ಗ್ರಾಮಸ್ಥರಿಗೆ ಆಹಾರ ಒದಗಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ನಾರಾಯಣಪೂರ ಆಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಬಿಟ್ಟಿದ್ದರಿಂದಾಗಿ ನಿಲಕಂಠರಾಯನ ಗಡ್ಡಿ ಗ್ರಾಮ ಹೊರಜಗತ್ತಿನಿಂದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಆ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, 250 ಜನರು ವಾಸಿಸುತ್ತಿದ್ದಾರೆ. ಅಲ್ಲಿಂದ ಈಜಿಕೊಂಡು ಬಂದಿರುವ ಐವರು, ಗ್ರಾಮದಲ್ಲಿ ತೀವ್ರ ಆಹಾರದ ಕೊರತೆ ಇದೆಯೆಂದು ಹೇಳಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ರೂಪಾ ಮೌದ್ಗೀಲ್, ಎಸಿ ಕವಿತಾ ಮನ್ನಿಕೇರಿ, ಸುರಪೂರ ತಹಶೀಲ್ದಾರ ರಾಧೇಶಾಮ ಭೇಟಿ ನೀಡಿ ಪರಿಶೀಲಿಸಿದರು. ನಾಳೆ ಬೆಳಿಗ್ಗೆ ಕೃಷ್ಣಾ ನದಿಯ ಪ್ರವಾಹದ ನೀರು ಇಳಿಮುಖವಾದಾಗ ಗ್ರಾಮಸ್ಥರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುವುದೆಂದು ತಹಶೀಲ್ದಾರ ಹೇಳಿದ್ದಾರೆ.