ರೆಡ್ಡಿಗಳ ಹೈಡ್ರಾಮಾ ಶುರು: ಸುಷ್ಮಾಗೆ ಪ್ರಧಾನಿಪಟ್ಟದ ಆಮಿಷ
ತಮ್ಮ ಮಾತೃಸ್ವರೂಪಿಯೂ ಆದ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸದಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಇದಕ್ಕಾಗಿ ಸುಷ್ಮಾ ಅವರಿಗೆ ಮುಂದಿನ ಪ್ರಧಾನಿಯಾಗುವ ಸಂದರ್ಭವನ್ನು ಮನವರಿಕೆ ಮಾಡಿಕೊಡುವ ಯತ್ನ ನಡೆದಿದೆ. ಅಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದರೆ ಯಡಿಯೂರಪ್ಪ ಅವರ ನಾಯಕತ್ವ ಬೇಕೇ ಬೇಕಾಗುತ್ತದೆ.
ಈ ದೃಷ್ಟಿಕೋನದಿಂದ ಚಿಂತನೆ ನಡೆಸುವ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವ ಬಗ್ಗೆ ಪ್ರಯತ್ನ ನಡೆಸುವಂತೆ ಗಣಿ ರೆಡ್ಡಿಗಳು ಸುಷ್ಮಾಗೆ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತರ ಗಣಿ ವರದಿಯ ಸೋರಿಕೆಯಲ್ಲಿ ಯಡಿಯೂರಪ್ಪ ಅವರ ಜತೆ ಸಚಿವರಾದ ಗಾಲಿ ಜನಾರ್ದನರೆಡ್ಡಿ, ಗಾಲಿ ಕರುಣಾಕರರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ಹೆಸರೂ ಪ್ರಸ್ತಾಪವಾಗಿರುವುದರಿಂದ ಗಣಿ ರೆಡ್ಡಿಗಳು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತೀವ್ರ ಸೆಣಸಾಟ ಆರಂಭಿಸಿದ್ದಾರೆ. ಇದುವರೆಗೆ ಸುಷ್ಮಾ ಸ್ವರಾಜ್ ಅವರನ್ನು ರೆಡ್ಡಿ ಸಹೋದರರು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದಿದ್ದರೂ ತಮ್ಮ ಆಪ್ತರ ಮೂಲಕ ಮನವಿ ರವಾನಿಸಿದ್ದಾರೆ ಎನ್ನಲಾಗಿದೆ.