ಸಿಎಂ ರೇಸ್ ನಲ್ಲಿ ಎಲ್ಲರೂ ಜಾಕಿಗಳೇ ಓಡೋ ಕುದ್ರೆ ಎಲ್ಲಿ?
ಹಲವು ನಾಯಕರು ಸಿಎಂ ಪಟ್ಟ ಆಕಾಂಕ್ಷಿಗಳಾದರೂ ಮುಖ್ಯಮಂತ್ರಿ ಹಾಟ್ ಸೀಟ್ ಏರುವ ಸಾಮರ್ಥ್ಯ ಸದ್ಯಕ್ಕೆ ಯಾವ ನಾಯಕರಲ್ಲೂ ಎಂಬುದು ಸ್ಪಷ್ಟವಾಗಿ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಪರ್ಯಾಯ ನಾಯಕ ಸೃಷ್ಟಿಯಾದರೂ ಅದು ಲಕ್ ಬೈ ಚಾನ್ಚ್ ಅಷ್ಟೇ.
ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೇಂದ್ರದ ನಾಯಕ ಅನಂತ ಕುಮಾರ್, ಸಚಿವ ಜಗದೀಶ್ ಶೆಟ್ಟರ್, ವಿಎಸ್ ಆಚಾರ್ಯ, ಸುರೇಶ್ ಕುಮಾರ್ ಅಲ್ಲದೇ ಶೋಭಾ ಕರಂದ್ಲಾಜೆ ಹೆಸರು ಸಿಎಂ ಪಟ್ಟಗಾಗಿ ನಡೆಯುತ್ತಿರುವ ರೇಸ್ ನಲ್ಲಿದೆ.
* ಒಂದು ವೇಳೆ ಯಡಿಯೂರಪ್ಪ ಮನಸ್ಸು ಮಾಡಿ ತಾವೇ ಕೆಳಗಿಳಿದರೆ ಅವರ ಆಪ್ತರಲ್ಲಿ ಒಬ್ಬರನ್ನು ಸಿಎಂ ಪಟ್ಟದಲ್ಲಿ ಕೂರಿಸಿ ಹಿಂಬದಿಯಿಂದ ಎಲ್ಲವನ್ನು ನಿಭಾಯಿಸಲಿದ್ದಾರೆ. ವಿಎಸ್ ಆಚಾರ್ಯ ಅಥವಾ ಶೋಭಾ ಈ ರೋಲ್ ಗೆ ಹೇಳಿ ಮಾಡಿಸಿದಂತೆ ಇದ್ದಾರೆ.
* ಆರ್ ಎಸ್ಎಸ್ ಮಾತ್ರ ಸುರೇಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದೆ.
* ಪರಸ್ಪರ ಆಕಾಂಕ್ಷಿಗಳಾಗಿದ್ದರೂ ಅನಂತ್ ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ಒಮ್ಮೆಯಾದರೂ ಹಾಟ್ ಸೀಟ್ ಕೂತರೆ ಸಾಕು ಎಂದು ಕಾದಿದ್ದಾರೆ. ಇಲ್ಲದಿದ್ದರೆ ಸಿದ್ದರಾಮಯ್ಯನ ಸಿಎಂ ಕನಸಿನ ಕಥೆ ನಮಗೂ ಆಗಬಹುದು ಎಂಬ ಭಯ ಇಬ್ಬರನ್ನು ಕಾಡುತ್ತಿದೆ.
* ಪಕ್ಷಕ್ಕೆ ಸಾಕಷ್ಟು ಆರ್ಥಿಕ ಬೆಂಬಲ ಒದಗಿಸಿರುವ ರೆಡ್ಡಿ ಸೋದರರಿಗೆ ಶೋಭಾ ಅಥವಾ ಕೆಎಸ್ ಈಶ್ವರಪ್ಪ ಅವರನ್ನು ಸಿಎಂ ಪಟ್ಟದಲ್ಲಿ ಕೂರಿಸಲು ಮನಸಿಲ್ಲ.
* ಜಗದೀಶ್ ಶೆಟ್ಟರ್ ಗೆ ರೆಡ್ಡಿ ಸೋದರರು, ಆರ್ ಎಸ್ಎಸ್ ಬೆಂಬಲ ಧಾರಾಳವಾಗಿ ಸಿಗಲಿದೆ. ಆದರೆ ಪಕ್ಷದಲ್ಲಿರುವ ಯಡಿಯೂರಪ್ಪ ಆಪ್ತ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ.
* ಅನಂತ್ ಕುಮಾರ್ ಸಿಎಂ ಆಗದೇ ಕಿಂಗ್ ಮೇಕರ್ ಆಗಿ ಶೆಟ್ಟರ್ ಅವರಿಗೆ ಪಟ್ಟ ಕಟ್ಟಬಹುದು.
ಪರ್ಯಾಯ ನಾಯಕತ್ವದ ಹುಡುಕಾಟ ನಡೆಸಿ ಬೇಸತ್ತಿರುವ ಬಿಜೆಪಿ ಹೈಕಮಾಂಡ್ ತನ್ನ ಕಸರತ್ತು ನಿಲ್ಲಿಸಿರುವ ಮಾಹಿತಿ ಸಿಕ್ಕಿದೆ. ಪರಸ್ಪರ ಒಪ್ಪಿಗೆಯಿಂದ ಅಧಿಕಾರದಲ್ಲಿ ಮುಂದುವರೆಯಿರಿ.
ಸಿಎಂ ಪಟ್ಟದಲ್ಲಿ ಯಾರನ್ನಾದರೂ ಕೂರಿಸಿಕೊಳ್ಳಿ ಆದರೆ, ದಕ್ಷಿಣ ಭಾರತದ ಏಕೈಕ ಸರ್ಕಾರ ತನ್ನ ಅವಧಿ ಮುಗಿಸುವಂತೆ ನೋಡಿಕೊಳ್ಳಿ ಎಂಬ ಕಿವಿಮಾತು ದೆಹಲಿಯಿಂದ ಬೆಂಗಳೂರಿನ ಬಿಜೆಪಿ ನಾಯಕರ ಕಿವಿ ಸೇರಿದೆ.