ಆಷಾಢ ಪೂಜೆ: ನಾಡಿನ ಸುಭಿಕ್ಷೆಗೆ ಪ್ರಾರ್ಥಿಸಿದ ಸಿಎಂ

ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಿಂದ ಹಮ್ಮಿಕೊಳ್ಳಲಾಗಿದ್ದ "ಆರೋಗ್ಯದ ನಡಿಗೆ ಬೆಟ್ಟದ ಕಡೆಗೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಡಿಯೂರಪ್ಪ ಬಳಿಕ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಿ ಅಲ್ಲಿ 5.30ಕ್ಕೆ ಆರಂಭಗೊಂಡ ವಿಶೇಷ ಪೂಜೆಯಲ್ಲಿ ಭಾಗವಹಿಸಿ ನಾನು ತೆಗೆದುಕೊಂಡ ನಿರ್ಧಾರಗಳು ಫಲಪ್ರದವಾಗಿದ್ದು, ಇನ್ನು ಮುಂದೆ ಉತ್ತಮ ಆಡಳಿತ ನಡೆಸಲು ಅನುಗ್ರಹಿಸುವಂತೆ ದೇವರಲ್ಲಿ ಬೇಡಿಕೊಂಡರು. ಈ ಸಂದರ್ಭ ರಾಜಕೀಯ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು.
ಇಂದು ಬೆಳಿಗ್ಗೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷಪೂಜೆ, ಆರಾಧನೆ, ಅಭಿಷೇಕ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ ಸೇರಿದಂತೆ ಹಲವು ದೈವಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 4 ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಈ ಸಂದರ್ಭ ದೇವರ ಸನ್ನಿಧಿಯಲ್ಲಿ ಉಪಸ್ಥಿತರಿದ್ದ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.
ಕೆಲವು ಸಂಘಟನೆಗಳು ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದವು. ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ ಕಾರಣದಿಂದಾಗಿ ರಸ್ತೆ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಕಂಡು ಬರಲಿಲ್ಲ. ಹೆಚ್ಚಿನ ಭಕ್ತರು ಬಸ್ಸಿನಲ್ಲಿ ದೇವಾಲಯಕ್ಕೆ ತೆರಳಿದರೆ, ಇನ್ನು ಕೆಲವರು ಸಾವಿರ ಮೆಟ್ಟಿಲನ್ನು ಹತ್ತಿ ದೇವರ ದರ್ಶನ ಮಾಡಿದರು.












Click it and Unblock the Notifications