ಹುಣಸೂರು ಜೋಡಿ ಹತ್ಯೆ- ದುಬೈ ನವೀದ್ ಸೂತ್ರಧಾರ

'ನವೀದ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಆತನ ಕುಟುಂಬ ಮೈಸೂರಿನಲ್ಲಿ ನೆಲೆಸಿದೆ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಮೈಸೂರಿಗೆ ಬಂದು ಹೋಗುತ್ತಿದ್ದ ಆತ ಇಡೀ ಪ್ರಕರಣದ ಸಂಚು ರೂಪಿಸಿದ್ದ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ' ಎಂದು ತನಿಖಾ ತಂಡದ ನೇತೃತ್ವ ಹೊತ್ತಿರುವ ಬೆಂಗಳೂರು ಜಂಟಿ ಪೊಲೀಸ್ ಕಮೀಷನರ್ (ಅಪರಾಧ) ಅಲೋಕ್ ಕುಮಾರ್ ಹೇಳಿದ್ದಾರೆ.
'ನವೀದ್ ಸಹ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್ಡಿ) ಸಂಘಟನೆಯ ಸದಸ್ಯನೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಆದ್ದರಿಂದ ಅವನ ಪೂರ್ವಾಪರಗಳ ಬಗ್ಗೆ ತನಿಖೆ ಪೂರ್ಣಗೊಳ್ಳದೆ ಏನೂ ಹೇಳಲಾಗದು' ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇನ್ನೂ ನಾಲ್ಕು ಮಂದಿ ಭಾಗಿ: 'ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಭಾಗಿಯಾಗಿದ್ದು, ಅವರೆಲ್ಲ ತಲೆಮರೆಸಿಕೊಂಡಿದ್ದಾರೆ. ನವೀದ್ ಮತ್ತು ಇತರೆ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದ್ದು, ಸದ್ಯದಲ್ಲೇ ಅವರನ್ನೆಲ್ಲ ಬಂಧಿಸಲಾಗುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೋಲಿಸ್ ಕಸ್ಟಡಿಗೆ: ಈ ನಡುವೆ ಬಂಧಿತ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಹೆಚ್ಚಿನ ತನಿಖೆಗಾಗಿ 14 ದಿನಗಳವರೆಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಬುಧವಾರ ಸಂಜೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿ ಪೊಲೀಸ್ ವಶಕ್ಕೆ ನೀಡುವಂತೆ ಕೋರಲಾಯಿತು.
ಶವ ಪತ್ತೆಯಾದ ಸ್ಥಳ ಪರಿಶೀಲನೆ: ಬಿಬಿಎಂ ವಿದ್ಯಾರ್ಥಿಗಳಾದ ಸುಧೀಂದ್ರ, ವಿಘ್ನೇಶ್ ಶವಗಳು ಪತ್ತೆಯಾದ ಸ್ಥಳವನ್ನು ಬೆಂಗಳೂರು ಜಂಟಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಕೃಷ್ಣಂರಾಜು ಗುರುವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶವಗಳು ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು, ಕೊಲೆ ಆರೋಪಿಗಳು ಇಲ್ಲಿ ಬರಲು ಕಾರಣವೇನು? ಶವಗಳನ್ನು ಇಲ್ಲೇ ಎಸೆಯಲು ಕಾರಣಗಳೇನು? ಎಂಬ ಮಾಹಿತಿ ಪಡೆದುಕೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಸರ್ಕಲ್ ಇನ್ಸ್ಪೆಕ್ಟರ್ ಎಸ್.ಶಿವಕುಮಾರ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಮುನಿರೆಡ್ಡಿ ಉಪಸ್ಥಿತರಿದ್ದರು.












Click it and Unblock the Notifications