ಆಣೆ ಪ್ರಮಾಣ 'ಅಗ್ನಿ ಪರೀಕ್ಷೆ'ಯಲ್ಲಿ ಯಡಿಯೂರಪ್ಪ ಫೇಲ್!

ಆಣೆ ಮಾಡಲು ತಾಕತ್ತಿಲ್ಲದಿದ್ದ ಮೇಲೆ ಧರ್ಮಸ್ಥಳ ಮಂಜುನಾಥನ ಮೇಲೆ ಯಡಿಯೂರಪ್ಪ ಆಣೆ ಮಾಡಿದ್ದಾದರೂ ಏಕೆ? ಇದು ರಾಜ್ಯದ ಮತದಾರರನ್ನು ಕಾಡುತ್ತಿರುವ ಪ್ರಶ್ನೆ. ಆಣೆ ಮಾಡುತ್ತಿರುವುದು ಯಾವುದಕ್ಕೆ? ಸತ್ಯವನ್ನು ಹೇಳುವುದಕ್ಕಾ? ಅಥವಾ ಇರುವ ಸುಳ್ಳುಗಳನ್ನು ಸತ್ಯ ಮಾಡುವುದಕ್ಕಾ? ಅಥವಾ ಸತ್ಯಗಳ ತಲೆಯ ಮೇಲೆ ಹೊಡೆದಂತೆ ಮತ್ತೆ ಸುಳ್ಳು ಹೇಳುವುದಕ್ಕಾ? ಇವರಿಬ್ಬರು ಸತ್ಯ ಹೇಳುತ್ತಾರೆಂದು ಯಾರಿಗೂ ನಂಬಿಕೆಯಿರಲಿಲ್ಲ.
ಇದು, ನಮ್ಮ ರಾಜಕಾರಣಿಗಳು ರಾಜ್ಯದ ಪ್ರಜೆಗಳ ಮೇಲೆ ವಿಶ್ವಾಸ ಬೆಳೆಸಿಕೊಂಡು ಬಂದಿರುವ ರೀತಿ. ಆಣೆ ಪ್ರಮಾಣ ಮಾಡುವುದಿಲ್ಲ, ಮಂಜುನಾಥನಿಗೆ ಬರೀ ಕೈ ಮುಗಿದು ಬರುತ್ತೇನೆ ಎಂದು ಹೇಳಿ ಯಡಿಯೂರಪ್ಪ ಕೈತೊಳೆದುಕೊಂಡಿದ್ದಾರೆ. ಆದರೆ, ಇದರಿಂದ ಅವರ ವ್ಯಕ್ತಿತ್ವಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆದುಕೊಳ್ಳುವುದು ಸಾಧ್ಯವೆ? ಈ ಪ್ರಹಸನಕ್ಕೆ ತೆರೆಬಿದ್ದು, ಇಬ್ಬರೂ ಮುಖಕ್ಕೆ ಹಚ್ಚಿಕೊಂಡಿದ್ದ ಬಣ್ಣ ಅಳಿಸಿ ತಣ್ಣಗಾಗಿಬಿಡುತ್ತಾರೆ.
ಆದರೆ, ಆಶ್ಚರ್ಯ ತಂದಿರುವುದು ಸಾರ್ವಜನಿಕರ ಧೋರಣೆ. ಈ ಪ್ರಹಸನವನ್ನು ಒಂದು ಹಾಸ್ಯ ನಾಟಕವನ್ನಾಗಿ ಜನ ನೋಡಿದರೆ ಹೊರತು, ಅದರ ಗಾಂಭೀರ್ಯತೆ ಬಗ್ಗೆ ಚಿಂತಿಸಲಿಲ್ಲ. ಚಿಕ್ಕಮಕ್ಕಳಂತೆ ಆಣೆ ಪ್ರಮಾಣ ಮಾಡುವ ಹೇಳಿಕೆಗಳನ್ನು ನೋಡಿ ಸುಮ್ಮನಿದ್ದರೆ ಹೊರತು ಯಾರೂ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸಲಿಲ್ಲ. ಇದೆಂಥ ಹುಚ್ಚಾಟವೆಂದು ಯಾವ ಜನಪರ ಕಾಳಜಿಯಿರುವ ಸಂಘಟನೆಯೂ ಸಿಡಿದೇಳಲಿಲ್ಲ. ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಆಡುವ ಆಟವೆ ಎಂದು ಪ್ರಶ್ನಿಸಲಿಲ್ಲ.
ಆಣೆ ಪ್ರಮಾಣ ಮಾಡಿದರೆ ದೇವರಿಗೇ ಅಪಚಾರವಾಗುತ್ತದೆ ಎಂದು ಕೆಲ ಸ್ವಾಮೀಜಿಗಳು ಹೇಳಿಕೆ ನೀಡಿದರು. ನಿರೀಕ್ಷಿಸಿದಂತೆ, ಸ್ವಾಮೀಜಿಗಳಿಗೆ ಗೌರವ ಕೊಟ್ಟಿ ಆಣೆ ಪ್ರಮಾಣದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ ಯಡಿಯೂರಪ್ಪ. ಆಣೆ ಪ್ರಮಾಣದ ನಿರ್ಧಾರ ತೆಗೆದುಕೊಳ್ಳುವಾಗ, ಇಂಥ ಸ್ವಾಮೀಜಿಗಳ ಸಮ್ಮತಿಯನ್ನು ಅಥವಾ ಸಲಹೆಯನ್ನು ಇವರು ಏಕೆ ತೆಗೆದುಕೊಳ್ಳಲಿಲ್ಲ? ಸಾರ್ವಜನಿಕರು ಈಗ ಏನು ಹೇಳುತ್ತಾರೆ?












Click it and Unblock the Notifications