ಸಾರಿಗೆ ಸಚಿವರ ಕ್ಷೇತ್ರದಲ್ಲಿ ಶಾಪಗ್ರಸ್ತ ಬಸ್ ನಿಲ್ದಾಣ

ಈ ಬಸ್ ನಿಲ್ದಾಣಕ್ಕೆ 2005 ರಲ್ಲಿ ಶಂಕುಸ್ಥಾಪನೆ ಹಾಕಲಾಗಿತ್ತು. ಆದರೆ ಮುಂದೆ ಯಾವುದೇ ಪ್ರಗತಿ ಕಾಣಲಿಲ್ಲ. ಕೊನೆಗೆ ನಾಗರಿಕರ ಹಾಗೂ ಸಂಘ ಸಂಸ್ಥೆಗಳ ಒತ್ತಾಯದಿಂದ 2009 ರಲ್ಲಿ ಚುರುಕಿನಿಂದ ಕಾಮಗಾರಿ ಪ್ರಾರಂಭವಾಯಿತು. ದುರದೃಷ್ಟ ಎಂದರೆ ಈ ಬಡಾವಣೆಗೆ ಯಾರ ಶಾಪತಟ್ಟಿತೋ ಎಂಬಂತೆ ನಿರ್ಮಾಣದ ಕೊನೆಯ ಹಂತದಲ್ಲಿ ತಲುಪಿದಾಗ ಕಾಮಗಾರಿ ಆಮೆಯ ವೇಗದಲ್ಲಿ ಸಾಗುತ್ತಿದೆ.
ನಿಲ್ದಾಣಕ್ಕೆ ಹೆಚ್ಚಿನ ಸ್ಥಳಾವಕಾಶ ಒದಗಿಸಿ ಕೊಡುವ ಉದ್ದೇಶದಿಂದ ಇದಕ್ಕೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆ ಮತ್ತು ಪಕ್ಕದ ಜಾಗವನ್ನು ಬಿಬಿಎಂಪಿಯವರಿಂದ ಬಿಎಂಟಿಸಿ ಯವರು ಸ್ವಾಧೀನಪಡಿಸಿಕೊಳ್ಳಬೇಕೆಂದು ಇಲ್ಲಿ ಸಂಘ - ಸಂಸ್ಥೆಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಎಷ್ಟು ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ. ನಿರ್ಮಾಣ ಸ್ಥಗಿತಗೊಂಡಿರುವ ಈ ಬಸ್ ನಿಲ್ದಾಣಕ್ಕೆ ಹೈಟೆಕ್ ಮೆರಗು ಕೊಡಲು ಹೆಚ್ಚಿನ ಸ್ಥಳ ಅವಶ್ಯವಾಗಿದೆ.
ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಈ ಬಡಾವಣೆಯ ನಾಗರಿಕರ ಪರವಾಗಿ ಪ್ರಾರ್ಥಿಸುವುದೇನೆಂದರೆ ಆದಷ್ಟು ಭೂ ಸ್ವಾಧೀನ ಮುಗಿಸಿ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು. ಸರಿಯಾದ ವೇಳೆಗೆ ಬಸ್ ಸಂಚಾರ ನಿಗದಿ ಪಡಿಸಿ, ಟಿಸಿ ಹಾಗೂ ಬಿಎಂಟಿಸಿ ಬೂತ್ ನೇಮಕ ಮಾಡಬೇಕು. ಪ್ರತಿದಿನ ನೂರಾರು ಜನ ವಿದ್ಯಾರ್ಥಿಗಳು ಈ ನಿಲ್ದಾಣದ ಮೂಲಕ ಬಸ್ ಹತ್ತುತ್ತಾರೆ. ಅವರ ಅನುಕೂಲಕ್ಕೆ ಹೆಚ್ಚಿನ ಬಸ್ ಅಥವಾ ಪ್ರತ್ಯೇಕ ಶಾಲಾ ವಿಶೇಷ ವಾಹನ(ಜಯನಗರ 4ನೇ ಬ್ಲಾಕ್) ಸಂಚರಿಸಿದರೆ ಅನುಕೂಲವಾದೀತು.












Click it and Unblock the Notifications