ವಿಕೃತ ಕಾಮಿಯ ಬೆಂಡೆತ್ತಿದ ಚೋಳೇನಹಳ್ಳಿ ಚುರುಕು ಮಹಿಳೆಯರು
ಭಾನುವಾರ ಸಂಜೆ (ಜೂಬ್ 12) ಮಳೆ ಬಂದ ಕಾರಣ ಜಮೀನಿನ ಬಳಿ ಇದ್ದ ಮಹಿಳೆಯೊಬ್ಬರು ಮರದ ಅಶ್ರಯ ಪಡೆಯಲು ಹೋದರು. ಇದೇ ಸಂದರ್ಭದಲ್ಲಿ ಪ್ರತ್ಯಕ್ಷನಾದ ವಿಕೃತ ಕಾಮಿ ಕಾಂತ ಈಕೆ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದ. ಈತನ ವಿಕೃತ ಕೃತ್ಯಕ್ಕೆ ಬೆದರಿದ ಮಹಿಳೆ ಕೂಗಿಕೊಂಡಿದ್ದಾರೆ. ಒಂಟಿ ಮಹಿಳೆಯರು, ಶಾಲಾ ಕಾಲೇಜು ಬಾಲಕಿಯರಿಗೆ ಸಿಂಹಸ್ವಪ್ನವಾಗಿದ್ದ ವಿಕೃತ ಕಾಮಿ ವಿರುದ್ಧ ಈಗಾಗಲೇ ಏಳೆಂಟು ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿವೆ.
ಇದೇ ಸಂದರ್ಭದಲ್ಲಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಂಜೇಗೌಡ, ತಮ್ಮಣ್ಣಗೌಡ, ಕುಮಾರ ಎಂಬುವರು ಸಹಾಯಕ್ಕೆ ಬಂದರು. ಇವರ ಮೇಲೆ ವಿಕೃತಕಾಮಿ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ. ನಂತರ ತಪ್ಪಿಸಿಕೊಂಡು ಓಡಲಾರಂಭಿಸಿದ. ಆದರೆ, ನಾಲೆ ದಾಟುವ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದ. ತಕ್ಷಣ ಅವನನ್ನು ಹಿಡಿದು ಗ್ರಾಮಕ್ಕೆ ತಂದು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದರು. ಇಷ್ಟು ದಿವಸದಿಂದ ಈತನ ವಿಕೃತ ಕಾಮ ಕೀಟಳೆ ಸಹಿಸಿಕೊಂಡಿದ್ದ ಮಹಿಳೆಯರು ಆಕ್ರೋಶಿತರಾಗಿ ಪೊರಕೆ ಸೇವೆಯನ್ನು ಕೂಡ ನಡೆಸಿದರು.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಥಳಿತದಿಂದ ತೀವ್ರ ಅಸ್ವಸ್ಥನಾಗಿದ್ದ ಕಾಂತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಿಕೃತ ಕಾಮಿಯನ್ನು ಈಗಾಗಲೇ ಹಲವಾರು ಬಾರೀ ಬಂಧಿಸಿ ಬಿಡುಗಡೆಗೊಳಿಸಿದ್ದೀರಿ. ನಾವು ಈತನನ್ನು ಪೊಲೀಸರಿಗೆ ಒಪ್ಪಿಸುವುದಿಲ್ಲವೆಂದು ಪಟ್ಟು ಹಿಡಿದರು.