ರಾಮದೇವ್ -ಸರಕಾರದ ಮಧ್ಯೆ ರಹಸ್ಯ ಒಪ್ಪಂದ ಆಗಿತ್ತೇ?

ಶನಿವಾರವಿಡೀ ಉಪವಾಸ ಸತ್ಯಾಗ್ರಹ ಪ್ರಹಸನ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಇಷ್ಟಕ್ಕೆಲ್ಲ ಕಾರಣವಾಗಿದ್ದು 'ನಿಮ್ಮ 3 ಪ್ರಮುಖ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದೇವೆ ಎಂದು ಸರಕಾರ ಲಿಖಿತವಾಗಿ ಹೇಳುತ್ತಿದ್ದಂತೆ ನಾವು ಭಾನುವಾರ ಮಧ್ಯಾಹ್ನದ ಹೊತ್ತಿಗೆ ಉಪವಾಸ ನಿಲ್ಲಿಸುತ್ತೇವೆ' ಎಂದು ಸತ್ಯಾಗ್ರಹ ಆರಂಭವಾಗುವುದಕ್ಕೂ ಮುನ್ನವೇ ರಾಮದೇವ್ ಹಾಗೂ ಸರಕಾರದ ನಡುವೆ ಆಗಿತ್ತೆನ್ನಲಾದ ಒಪ್ಪಂದ!
ಹಿಂಗೊಂದು ಒಪ್ಪಂದವಾಗಿತ್ತು ಎಂಬುದು ಶನಿವಾರ ರಾತ್ರಿ ಇನ್ನೇನು ಸತ್ಯಾಗ್ರಹ ಪ್ರಹಸನ ಸುಖಾಂತ್ಯವಾಯಿತು ಎನ್ನುವಾಗ ಬಹಿರಂಗವಾಯಿತು. ಆಗ ರಾಮದೇವ್ ಮತ್ತು ಕಪಿಲ್ ಸಿಬಲ್ ಪರಸ್ಪರ ಜಟಾಪಟಿಗೆ ಇಳಿದರು.
ರಹಸ್ಯ ಪತ್ರ ವ್ಯವಹಾರ: ಶನಿವಾರ ಸಂಜೆ ರಾಮದೇವ್ ಅವರ ಆಪ್ತರಾದ ಆಚಾರ್ಯ ಬಾಲಕೃಷ್ಣನ್ ಎಂಬುವರು ಕಪಿಲ್ ಸಿಬಲ್ ಬಳಿಗೆ ತೆರಳಿ ಪತ್ರವೊಂದನ್ನು ನೀಡಿದರು. ತಕ್ಷಣ ಪತ್ರಿಕಾಗೋಷ್ಠಿ ನಡೆಸಿದ ಸಿಬಲ್ ಈ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿಬಿಟ್ಟರು. ಪತ್ರದಲ್ಲಿ ಸರಕಾರ ನಮ್ಮ ಬೇಡಿಕೆಗಳಿಗೆ ಒಪ್ಪಿಕೊಂಡಿರುವುದರಿಂದ ಭಾನುವಾರ ಮಧ್ಯಾಹ್ನದ ವೇಳೆಗೆ ನಾವು ಉಪವಾಸ ಅಂತ್ಯಗೊಳಿಸುತ್ತಿದ್ದೇವೆ ಎಂದು ರಾಮದೇವ್ ಬರೆದಿದ್ದರು.
ಇದನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಬಲ್, ರಾಮದೇವ್ ಅವರ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದೆ. ಕಪ್ಪು ಹಣ ಮರಳಿ ತರಲು ಕಾಯಿದೆಯನ್ನು ರೂಪಿಸುವ ಸಂಬಂಧ ಸಮಿತಿ ರಚಿಸಲಾಗುವುದು. ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆಗೆ ಅತ್ತ ಸತ್ಯಾಗ್ರಹದ ಸ್ಥಳದಲ್ಲಿ ರಾಮದೇವ್ ಅಲ್ಲಿದ್ದ ಜನಸ್ತೋಮಕ್ಕೆ ಸದ್ಯದಲ್ಲೇ ಉಪವಾಸ ಅಂತ್ಯಗೊಳಿಸುವ ಶುಭ ಸುದ್ದಿ ನೀಡುತ್ತೇನೆಂದು ಹೇಳುತ್ತಿದ್ದರು. ಆದರೆ ಯಾವಾಗ ಸಿಬಲ್ ಪತ್ರ ಬಿಡುಗಡೆ ಮಾಡಿದರೆಂಬ ಸುದ್ದಿ ಅವರ ಕಿವಿಗೆ ಬಿತ್ತೋ ಆಗ ವ್ಯಗ್ರಗೊಂಡರು. ಅಲ್ಲಿದ್ದ ಮಾಧ್ಯಮದವರು ಕೂಡ ರಾಮದೇವ್ರನ್ನು ಮೊದಲೇ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದನ್ನು ಮುಚ್ಚಿಟ್ಟಿದ್ದೇಕೆ ಎಂದು ತರಾಟೆ ತೆಗೆದುಕೊಂಡರು. ಗಲಿಬಿಲಿಗೊಂಡ ರಾಮದೇವ್, ಜನರು ಸತ್ಯಾಗ್ರಹದಿಂದ ದೂರ ಹೋದಾರೆಂದು ಬಹಿರಂಗಪಡಿಸಲಿಲ್ಲ ಎಂದರು.











Click it and Unblock the Notifications