ಶುಕ್ರವಾರ ಬೆಂಗಳೂರು ಪೂರ್ವಕ್ಕೆ ನಲ್ಲಿಯಲ್ಲಿ ಹೊಸನೀರು

ಮಿಲ್ಲರ್ ರಸ್ತೆಯಲ್ಲಿನ ಹಳೆ ಪೈಪುಗಳನ್ನು ಹೊಸದರಿಂದ ಬದಲಾಯಿಸುತ್ತಿದ್ದ ಕಾರಣ ಫ್ರೇಸರ್ ಟೌನ್, ಬೆನ್ಸನ್ ಟೌನ್, ಪಿಲ್ಲಣ್ಣ ಗಾರ್ಡನ್, ಕಾಕ್ಸ್ ಟೌನ್, ಡಿಜೆ ಹಳ್ಳಿ, ಕೆಜಿ ಹಳ್ಳಿ, ಮಚಲಿಬೆಟ್ಟ, ಎಚ್ಆರ್ ಬಿಆರ್ ಬಡಾವಣೆ, ಎನ್ ಜಿಇಎಫ್ ಪಶ್ಚಿಮ, ಕಸ್ತೂರಿನಗರ, ಬಾಣಸವಾಡಿ, ಮುರುತಿ ಸೇವಾನಗರ, ಬೈಯಪ್ಪನಹಳ್ಳಿ, ಕುಶಾಲನಗರ, ಜೀನವಹಳ್ಳಿ ಮತ್ತು ರಾಮಸ್ವಾಮಿ ನಗರಕ್ಕೆ ನೀರಿನ ಸರಬರಾಜನ್ನು ನಿಲ್ಲಿಸಲಾಗಿತ್ತು.
ನಲವತ್ತು ವರ್ಷಗಳಿಂದ ಬದಲಾಯಿಸದ ಕಾರಣ ತುಕ್ಕು ಹಿಡಿದು, ಅನೇಕ ಕಡೆಗಳಲ್ಲಿ ಸೋರುತ್ತಿದ್ದ ಪೈಪುಗಳನ್ನು ಅಳವಡಿಸುವುದು ತೀರ ಅಗತ್ಯವಾಗಿತ್ತು. 600 ಮಿಮೀ ವ್ಯಾಸದ ಪೈಪುಗಳನ್ನು ಅಳವಡಿಸುವ ತುರ್ತು ಕಾಮಗಾರಿಗೆ ಕೈ ಹಾಕಿದ ಜಲಮಂಡಳಿ ಕಾಮಗಾರಿ ಪೂರ್ತಿಯಾಗಿದ್ದು, ಶುಕ್ರವಾರ ಬೆಳಿಗ್ಗೆಯಿಂದ ನೀರು ಈ ಎಲ್ಲ ಭಾಗಗಳಲ್ಲಿ ಪೂರೈಕೆಯಾಗಲಿದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಆರಂಭದಲ್ಲಿ ಕೇವಲ ಎರಡು ಗಂಟೆ ಮಾತ್ರ ನೀರು ಬಿಟ್ಟು ಪೈಪುಗಳಲ್ಲಿ ಕುಳಿತಿರುವ ಮಣ್ಣು ನಿವಾರಣೆಯಾದ ನಂತರ ಪೂರೈಕೆಯನ್ನು ಹೆಚ್ಚಿಸಲಿದ್ದಾರೆ. ಕೂಡಿಟ್ಟುಕೊಳ್ಳಲೂ ಆಗದೆ, ಹೆಚ್ಚು ಹಣ ತೆತ್ತು ಟ್ಯಾಂಕರುಗಳಿಂದ ನೀರನ್ನು ತರಿಸಿಕೊಳ್ಳಲೂ ಆಗದೆ ನೀರಿಗಾಗಿ ಕಾದಿದ್ದ ಜನ ನಿರಾಳದ ನಿಟ್ಟುಸಿರುಬಿಡುವಂತಾಗಿದೆ.












Click it and Unblock the Notifications