ಬೆಂಗಳೂರು ಇಸ್ಕಾನ್ ಶಾಖೆ ಮುಂಬೈ ಸುಪರ್ದಿಗೆ
ಇಸ್ಕಾನ್ ಬೆಂಗಳೂರು ಶಾಖೆ ಮುಂಬೈ ಒಡೆತನಕ್ಕೆ ಸೇರಿದರೂ, ಮಧುಪಂಡಿತ್ ದಾಸ್ ಅಧ್ಯಕ್ಷರಾಗಿ ಹಾಗೂ ಚಂಚಲಪತಿ ದಾಸ್ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆದರೆ ಇಸ್ಕಾನ್ ದೇವಸ್ಥಾನದ ನಿರ್ವಹಣೆ ಹಾಗೂ ಲೆಕ್ಕಪತ್ರ ಪರಿಶೀಲನೆ ಮೇಲೆ ಮುಂಬೈ ಶಾಖೆಯ ಸುಪರ್ದಿಯಲ್ಲಿರುತ್ತದೆ. 1998ಕ್ಕೂ ಹಿಂದೆ ಇಸ್ಕಾನ್ ಬೆಂಗಳೂರು ಶಾಖೆಗೆ ಸಂಬಂಧಿಸಿದಂತೆ ಮುಂಬೈ ಶಾಖೆ ಅನುಸರಿಸುತ್ತಿದ್ದ ನಿಯಮಗಳು ಇಂದಿನಿಂದ ಮತ್ತೆ ಜಾರಿಯಲ್ಲಿರುತ್ತವೆ ಎಂದು ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ.
ಇಸ್ಕಾನ್ ದೇವಸ್ಥಾನದ ಬೆಂಗಳೂರು ಶಾಖೆಯ ನಿರ್ವಹಣೆಗೆ ಸಂಬಂಧಿಸಿದಂತೆ 1998ರಿಂದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬೆಂಗಳೂರು ಹಾಗೂ ಮುಂಬೈ ಶಾಖೆಗಳು ಕಾನೂನು ಹೋರಾಟ ನಡೆಸುತ್ತಿದ್ದವು. ಕಳೆದ 2009ರ ಏಪ್ರಿಲ್ 17 ರಂದು 9ನೇ ಸಿಟಿ ಸಿವಿಲ್ ನ್ಯಾಯಾಲಯ ಇಸ್ಕಾನ್ ದೇವಸ್ಥಾನದ ಬೆಂಗಳೂರು ಶಾಖೆ ಮಧುಪಂಡಿತ್ ದಾಸ್ ಅಧ್ಯಕ್ಷರಾಗಿರುವ ಬೆಂಗಳೂರು ನೋಂದಾಯಿತ ಸೊಸೈಟಿಗೆ ಸೇರಿದ್ದೆಂದು ತೀರ್ಪು ನೀಡಿತ್ತು. ಈ ಸೊಸೈಟಿಯಲ್ಲಿ ಚಂಚಲಪತಿ ದಾಸ್ ಉಪಾಧ್ಯಕ್ಷರಾಗಿದ್ದು, ಅವರ ಕುಟುಂಬ ಸದಸ್ಯರು ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ನೇಮಕಗೊಂಡಿದ್ದರು.
ಸಿಟಿ ಸಿವಿಲ್ ಕೋರ್ಟ್ ತೀರ್ಪು ಪ್ರಶ್ನಿಸಿ ಮುಂಬೈ ಶಾಖೆ ರಾಜ್ಯ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇಸ್ಕಾನ್ ದೇವಸ್ಥಾನದ ಬೆಂಗಳೂರು ಶಾಖೆಯ ಒಡೆತನಕ್ಕೆ ಸಂಬಂಧಿಸಿದಂತೆ ಮಧುಪಂಡಿತ್ ದಾಸ್ ನೇತೃತ್ವದ ಬೆಂಗಳೂರು ಸೊಸೈಟಿ ದಾಖಲಾತಿಗಳನ್ನು ತಿದ್ದಿ, ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಟಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ತೀರ್ಪನ್ನು ವಿಭಾಗೀಯ ಪೀಠ ರದ್ದು ಮಾಡಿ, ಬೆಂಗಳೂರು ಇಸ್ಕಾನ್ ಶಾಖೆಯ ಒಡೆತನ ಮುಂಬೈ ಶಾಖೆಗೆ ಸೇರಿದೆಂದು ತೀರ್ಪು ನೀಡಿತು.
ತಡೆಯಾಜ್ಞೆಗೆ ಅರ್ಜಿ: ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ನೀಡಿರುವ ತೀರ್ಪಿಗೆ ತಡೆ ಕೋರಿ ಇಸ್ಕಾನ್ ಬೆಂಗಳೂರು ಶಾಖೆಯ ಅಧ್ಯಕ್ಷ ಮಧುಪಂಡಿತ್ ದಾಸ್ ಮತ್ತು ಉಪಾಧ್ಯಕ್ಷ ಚಂಚಲಪತಿ ದಾಸ್ ಇಂದೇ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದರು. ತಡೆಯಾಜ್ಞೆ ಕೋರಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಮಂಗಳವಾರ ಬೆಳಿಗ್ಗೆ ನಡೆಯಲಿದೆ.