ಬಹುಮುಖ ಪ್ರತಿಭೆಯ ಕನ್ನಿಮೋಳಿ ವ್ಯಕ್ತಿಚಿತ್ರ
[2ಜಿ ತರಂಗಗುಚ್ಛ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಕನ್ನಿಮೋಳಿ ನಿರ್ದೋಷಿಯೆಂದು ವಿಶೇಷ ನ್ಯಾಯಾಲಯ ಡಿಸೆಂಬರ್ 21, 2017ರಂದು ಮಹತ್ವದ ತೀರ್ಪು ನೀಡಿದೆ. ಕನ್ನಿಮೋಳಿ ಅವರ ವ್ಯಕ್ತಿಚಿತ್ರ ಬರೆದಿದ್ದು 2011ರ ಮೇ 20ರಂದು ಅವರಿಗೆ ಜೈಲು ಶಿಕ್ಷೆಯಾಗಿದ್ದಾಗ.]
ತಂದೆಯಂತೆಯೇ ದೇವರಲ್ಲಿ ಯಕಃಶ್ಚಿತ್ ನಂಬಿಕೆಯಿಲ್ಲದ ಕನ್ನಿಮೋಳಿ ಮಹತ್ವಾಕಾಂಕ್ಷಿ ಹೆಂಗಸು. ಸ್ವಯಂಘೋಷಿತ ಕವಯಿತ್ರಿ, ಹಾಡುಗಾರ್ತಿ, ನಟಿ, ರಾಜಕಾರಣಿ, ಪತ್ರಕರ್ತೆ, ಉದ್ಯಮಿ... ಹೀಗೆ ಬಹುಮುಖ ಪ್ರತಿಭೆಯನ್ನು ಪಡೆದಿರುವ ಕನ್ನಿಮೋಳಿ ಈಗ 2ಜಿ ತರಂಗಗುಚ್ಛ ಹಗರಣದಲ್ಲಿ ಪಟಿಯಾಲಾ ವಿಶೇಷ ನ್ಯಾಯಾಲಯದಿಂದ ಜಾಮೀನು ನಿರಾಕರಣೆಯಾಗಿದ್ದರಿಂದ ತಿಹಾರ್ ಜೈಲಿನ ದಾರಿ ಹಿಡಿದಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಮೂರನೆಯ ಪತ್ನಿ ರಾಜತಿ ಅಮ್ಮಾಳ್ ಅವರ ಮುದ್ದಿನ ಮಗಳು. 1968ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಕನ್ನಿಮೋಳಿಯನ್ನು ಕಂಡರೆ ಕರುಣಾನಿಧಿಗೆ ಇನ್ನಿಲ್ಲದ ಕರುಣೆ. ಕೆಲ ಕವನ ಸಂಕಲನಗಳನ್ನು ಬರೆದಿರುವ ಕನ್ನಿಮೋಳಿ ಸಾಹಿತ್ಯ ಪ್ರೇಮದಿಂದಾಗಿಯೇ ತಂದೆಗೆ ಹತ್ತಿರವಾಗಿದ್ದರು. ಕರುಣಾನಿಧಿಯವರಿಗೆ ಹತ್ತಿರವಾಗಿದ್ದರಿಂದ ಇಬ್ಬರು ಮಲಅಣ್ಣಂದಿರಾದ ಅಳಗಿರಿ ಮತ್ತು ಸ್ಟಾಲಿನ್ ರಿಂದ ತುಸು ದೂರವಾಗಿದ್ದರು.

ಮದ್ರಾಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡಿದಿರುವ ಕನ್ನಿಮೋಳಿ, ಕರುಣಾನಿಧಿ ಮಾಲಿಕತ್ವದ ಕಲೈಗ್ನಾರ್ ಟಿವಿ ಚಾನಲ್ಲಿನ ಹಿಂದಿನ ಶಕ್ತಿ, ಮಿದುಳು. ದೆಹಲಿಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂನ ಮುಖವಾಣಿಯಾಗಿದ್ದಾರೆ. 2ಜಿ ತರಂಗಗುಚ್ಛ ಹಗರಣದಲ್ಲಿ 214 ಕೋಟಿ ರು.ಗಳನ್ನು ಪಡೆದಿರುವ ಆರೋಪ ಹೊಂದಿದ್ದ ಕನ್ನಿಮೋಳಿಯನ್ನು ಆಕೆಯ ಮೇಲಿನ ಧೃತರಾಷ್ಟ್ರ ಪ್ರೇಮದಿಂದಾಗಿ ಕರುಣಾನಿಧಿ ಅಪಾರವಾಗಿ ಬೆಂಬಲಿಸಿದ್ದರು.
2007ರಲ್ಲಿ ರಾಜ್ಯಸಭಾ ಸದಸ್ಯರಾಗಿ ಸಂಸತ್ತನ್ನು ಪ್ರವೇಶಿಸಿದರು. ಆರೋಗ್ಯ, ಕುಟುಂಬ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸ್ತ್ರೀಶಕ್ತಿ, ಮಾನವ ಸಂಪನ್ಮೂಲ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಕನ್ನಿಮೋಳಿ ಅಲಂಕರಿಸಿದ್ದಾರೆ. 2ಜಿ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ ಎ ರಾಜಾ ಅವರನ್ನು ಕನ್ನಿಮೋಳಿ ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದರು. ಈಗ ಅನುಭವಿಸುತ್ತಿದ್ದಾರೆ. ಟಿವಿ ಚಾನಲ್ಲಿಗೂ ತಮಗೂ ಸಂಬಂಧವೇ ಇಲ್ಲ ಎಂದು ಸುಳ್ಳು ಹೇಳಿದ್ದ ಕನಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ಅಪ್ಪ ತಮ್ಮ ಜೀವಮಾನದಲ್ಲಿ ಮೂರು ಮದುವೆಯಾಗಿದ್ದರೆ, ಕನ್ನಿಮೋಳಿ ಎರಡು ಬಾರಿ ಮದುವೆಯಾಗಿದ್ದಾರೆ. ಮೊದಲ ಗಂಡ ಅತಿಬನ್ ಬೋಸ್, ಶಿವಕಾಶಿಯಲ್ಲಿ ಉದ್ಯಮಿಯಾಗಿದ್ದರು. ನಂತರ ಸಿಂಗಪುರದಲ್ಲಿರುವ ತಮಿಳು ಬರಹಗಾರ ಜಿ ಅರವಿಂದನ್ ಅವರನ್ನು ಕನ್ನಿಮೋಳಿ ಪ್ರೇಮ ವಿವಾಹವಾದರು. ಅವರಿಬ್ಬರಿಗೆ ಒಬ್ಬ ಮುದ್ದಿನ ಮಗನಿದ್ದಾನೆ. ಆತನ ಹೆಸರು ಆದಿತ್ಯ, ಅಂದರೆ ಉದಯಿಸುತ್ತಿರುವ ಸೂರ್ಯ, ಡಿಎಂಕೆ ಪಕ್ಷದ ಚಿಹ್ನೆ.












Click it and Unblock the Notifications