ರಾಜ್ಯಪಾಲ ಭಾರದ್ವಾಜ್ ಮಾಡಿದ್ದು ಸರಿಯೋ ತಪ್ಪೋ?

ಹಂಸರಾಜ್ ಬಿಜೆಪಿ ಸರಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿದ್ದಾರೆ, ಅಭಿವೃದ್ಧಿಯನ್ನು ಸಹಿಸಿಕೊಳ್ಳುತ್ತಿರಲಿಲ್ಲ, ಕಾಂಗ್ರೆಸ್ ನಾಯಕ ಕುಮ್ಮಕ್ಕಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕುಗಳು ಮಾಡುತ್ತಿರುವ ಆರೋಪಗಳು ಬರೀ ಕಾರಣಗಳಷ್ಟೆ. ಒಂದು ವೇಳೆ, ಆ ನಿಗೂಢ 'ಒಪ್ಪಂದ' ನಡೆಯದೇ ಹೋಗಿದ್ದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಸಂಭವನೀಯತೆಯೇ ಇರುತ್ತಿರಲಿಲ್ಲ.
ಓದಿ : ಕರ್ನಾಟಕ ಪ್ರೀಮಿಯರ್ ಲೀಗ್ : ಯಡ್ಡಿ vs ರಾಜ್ಯಪಾಲ
ಸುಪ್ರೀಂ ಕೋರ್ಟ್ ತೀರ್ಪು ಬಂದ ಕೂಡಲೆ ಮತ್ತು 'ಒಪ್ಪಂದ' ನಡೆಯುವ ಮುನ್ನ ರಾಜ್ಯಪಾಲ ಭಾರದ್ವಾಜ್ ಅವರು ಯಾಕೆ ವಿಧಾನಸಭೆಯನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಲಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲು ಇಷ್ಟೊಂದು ಸಮಯ ತೆಗೆದುಕೊಂಡಿದ್ದೇಕೆ? ಪ್ರಧಾನಿ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಈ ಕ್ರಮ ಕೈಗೊಂಡಿರುವುದು ಕೂಡ ಸಂಶಯದ ಬೊಟ್ಟನ್ನು ರಾಜ್ಯಪಾಲರತ್ತ ತೋರುವಂತಾಗಿದೆ.
ಕೇಂದ್ರಕ್ಕೆ ರಾಜ್ಯಪಾಲರು ಕಳಿಸಿರುವ ವಿಶೇಷ ವರದಿಯಲ್ಲಿನ ವಿಷಯವೂ ಇದೇ ಇರಬಹುದೆ? ಹಿಂದೆ ಭಿನ್ನಮತೀಯರು ಬಂಡಾಯವೆದ್ದಾಗಲೂ ಸ್ಪೀಕರ್ ಕ್ರಮವನ್ನು ಮತ್ತು ಭಿನ್ನರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ನಡೆಸುತ್ತಿದ್ದ ಕ್ರಮವನ್ನು ಹಂಸರಾಜ್ ಭಾರದ್ವಾಜ್ ತೀವ್ರವಾಗಿ ಖಂಡಿಸಿದ್ದರು. ಮುಂದೆ, ವಿಶ್ವಾಸ ಪ್ರಾಪ್ತಿಯಾಗಿ, ಅನೇಕ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದು, ಅನರ್ಹರು ಅರ್ಹರಾಗಿರುವ ಹೊತ್ತಿಗೆ ಭಾರಧ್ವಾಜ್ ಈ ಕ್ರಮ ತೆಗೆದುಕೊಂಡಿದ್ದಾರೆ.
ಕರ್ನಾಟಕದ ರಾಜಕೀಯ ಹಿಂದಿನ ಪಶ್ಚಿಮ ಬಂಗಾಳದ ಸರಕಾರದಷ್ಟು ಎಕ್ಕುಟ್ಟಿಹೋಗಿರದೆ ಇದ್ದರೂ, ಲಂಗುಲಗಾಮಿಲ್ಲದಂತೆ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದು ಸುಳ್ಳಲ್ಲ. ಕುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಪಾರಾಗಿ ಬಂದಿದ್ದಾರೆ. ಅವರ ಸಂಪುಟದಲ್ಲಿದ್ದ ಅನೇಕ ಶಾಸಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅರ್ಹ ಶಾಸಕರನ್ನು ಸೆಳೆಯಲು ಏನೇನು ಆಮಿಷಗಳನ್ನು ಒಡ್ಡಿರಬಹುದೆಂದು ಊಹಿಸುವುದು ಕೂಡ ಅಂತಹ ಕಷ್ಟಕರ ವಿಷಯವೂ ಅಲ್ಲ. [ದಟ್ಸ್ ಕನ್ನಡ ವಾರ್ತೆ]












Click it and Unblock the Notifications