ಮೈಸೂರಿನ ರಾಜ್ಯ ಹೆದ್ದಾರಿಯಲ್ಲಿ ಮಾವಿನಸಂತೆ...

ಈ ಮಾವಿನಹಣ್ಣಿನ ಸಂತೆಯನ್ನು ನೋಡಬೇಕಾದರೆ ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಕಡ್ನಳ್ಳಿಗೆ ಹೋಗಬೇಕು. ಈ ಹಳ್ಳಿಯೇ ಮಾವಿನಹಣ್ಣು ಸಂತೆಯ ಕೇಂದ್ರಬಿಂದು. ಸಾಮಾನ್ಯವಾಗಿ ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಸಾಗುವಾಗ ಚಿಕ್ಕಕಡ್ನಳ್ಳಿಯಲ್ಲಿ ಕಿಲೋಮೀಟರ್ಗಟ್ಟಲೆ ತಳ್ಳುವ ಗಾಡಿಗಳಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಪ್ರಯಾಣಿಕರ ಗಮನಸೆಳೆದಿರುತ್ತವೆ.
ಹಾಗೆನೋಡಿದರೆ ಚಿಕ್ಕಕಡ್ನಳ್ಳಿಯಲ್ಲಿ ನಡೆಯುತ್ತಿಯವ ಮಾವಿನಹಣ್ಣಿನ ಸಂತೆ ಇಂದು ನಿನ್ನೆಯದಲ್ಲ. ಇಲ್ಲಿನ ಸಂತೆಗೆ ಹಲವು ದಶಕಗಳ ಇತಿಹಾಸವಿದೆ. ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ. ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೊನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
ತೋಟದಿಂದ ತಾಜಾ ಹಣ್ಣುಗಳು : ಹಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು. ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿ ಕಂಡುಕೊಂಡರು. ಇವತ್ತಿಗೂ ಸುತ್ತಮುತ್ತಲ ಹಳ್ಳಿಯ ಯುವಕರು ಮಾವಿನಹಣ್ಣಿನ ಮಾರಾಟವನ್ನು ಪಾರ್ಟ್ ಟೈಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.
ದಿನಕಳೆದಂತೆ ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡಲು ಮುಂದಾದರು. ಈ ಹಳ್ಳಿಯ ವ್ಯಾಪ್ತಿಯಲ್ಲಿ ಹಲವು ಏಕರೆ ಪ್ರದೇಶದಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದಾರೆ. ಆದರೆ ಅವರ್ಯಾರು ಇಲ್ಲಿನ ಮಾವಿನಸಂತೆಗೆ ಹಣ್ಣನ್ನು ಕಳುಹಿಸುತ್ತಿಲ್ಲ ಎಂಬುವುದು ಕಟುಸತ್ಯ. ಹೆಚ್ಚಿನ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಚಿಕ್ಕಕಡ್ನಳ್ಳಿಯಲ್ಲಿ ದೊರೆಯುವ ಮಾವಿನಹಣ್ಣನ್ನು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ಕಳೆದ ಒಂಬತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಮಹದೇವ್ ಹೇಳುತ್ತಾರೆ.
ಫೆಬ್ರವರಿಯಿಂದ ಆರಂಭವಾಗುವ ಮಾವಿನಸಂತೆ ಆಗಸ್ಟ್ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಮೈಸೂರಿನತ್ತ ತೆರಳಿ ಗಾರೆ ಕೆಲಸ ಸೇರಿದಂತೆ ಯಾವುದಾದರು ಕೆಲಸ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಾರೆ. ಈ ಮಾವಿನಹಣ್ಣಿನ ಸಂತೆಯನ್ನು ಹತ್ತಿರದಿಂದ ನೋಡಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣವನ್ನು ಕೂಡ ಮಾಡಿದ್ದಾರೆ. ಹಳ್ಳಿಯಿಂದ ಮಾವಿನಹಣ್ಣನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ ಪಟ್ಟಣದಿಂದ ಖರೀದಿಸಿ ಅದನ್ನು ಹಳ್ಳಿಯಲ್ಲಿ ಮಾರಾಟ ಮಾಡಬಹುದು ಎನ್ನುವುದಾದರೆ ಅದು ಚಿಕ್ಕಕಡ್ನಳ್ಳಿಯ ಮಾವಿನಸಂತೆಯಲ್ಲಿ ಮಾತ್ರ ಸಾಧ್ಯ. ಹಾಗಾದರೆ ಮಾವಿನ ಹಣ್ಣಿನ ಮಾರಾಟ ಭರಾಟೆ ಹೇಗಿರಬಹುದು ನೀವೇ ಊಹಿಸಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications