ಮೈಸೂರಿನ ರಾಜ್ಯ ಹೆದ್ದಾರಿಯಲ್ಲಿ ಮಾವಿನಸಂತೆ...
ಈ ಮಾವಿನಹಣ್ಣಿನ ಸಂತೆಯನ್ನು ನೋಡಬೇಕಾದರೆ ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಕಡ್ನಳ್ಳಿಗೆ ಹೋಗಬೇಕು. ಈ ಹಳ್ಳಿಯೇ ಮಾವಿನಹಣ್ಣು ಸಂತೆಯ ಕೇಂದ್ರಬಿಂದು. ಸಾಮಾನ್ಯವಾಗಿ ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಸಾಗುವಾಗ ಚಿಕ್ಕಕಡ್ನಳ್ಳಿಯಲ್ಲಿ ಕಿಲೋಮೀಟರ್ಗಟ್ಟಲೆ ತಳ್ಳುವ ಗಾಡಿಗಳಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಪ್ರಯಾಣಿಕರ ಗಮನಸೆಳೆದಿರುತ್ತವೆ.
ಹಾಗೆನೋಡಿದರೆ ಚಿಕ್ಕಕಡ್ನಳ್ಳಿಯಲ್ಲಿ ನಡೆಯುತ್ತಿಯವ ಮಾವಿನಹಣ್ಣಿನ ಸಂತೆ ಇಂದು ನಿನ್ನೆಯದಲ್ಲ. ಇಲ್ಲಿನ ಸಂತೆಗೆ ಹಲವು ದಶಕಗಳ ಇತಿಹಾಸವಿದೆ. ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ. ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೊನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
ತೋಟದಿಂದ ತಾಜಾ ಹಣ್ಣುಗಳು : ಹಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು. ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿ ಕಂಡುಕೊಂಡರು. ಇವತ್ತಿಗೂ ಸುತ್ತಮುತ್ತಲ ಹಳ್ಳಿಯ ಯುವಕರು ಮಾವಿನಹಣ್ಣಿನ ಮಾರಾಟವನ್ನು ಪಾರ್ಟ್ ಟೈಂ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.
ದಿನಕಳೆದಂತೆ ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡಲು ಮುಂದಾದರು. ಈ ಹಳ್ಳಿಯ ವ್ಯಾಪ್ತಿಯಲ್ಲಿ ಹಲವು ಏಕರೆ ಪ್ರದೇಶದಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದಾರೆ. ಆದರೆ ಅವರ್ಯಾರು ಇಲ್ಲಿನ ಮಾವಿನಸಂತೆಗೆ ಹಣ್ಣನ್ನು ಕಳುಹಿಸುತ್ತಿಲ್ಲ ಎಂಬುವುದು ಕಟುಸತ್ಯ. ಹೆಚ್ಚಿನ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಚಿಕ್ಕಕಡ್ನಳ್ಳಿಯಲ್ಲಿ ದೊರೆಯುವ ಮಾವಿನಹಣ್ಣನ್ನು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ಕಳೆದ ಒಂಬತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಮಹದೇವ್ ಹೇಳುತ್ತಾರೆ.
ಫೆಬ್ರವರಿಯಿಂದ ಆರಂಭವಾಗುವ ಮಾವಿನಸಂತೆ ಆಗಸ್ಟ್ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಮೈಸೂರಿನತ್ತ ತೆರಳಿ ಗಾರೆ ಕೆಲಸ ಸೇರಿದಂತೆ ಯಾವುದಾದರು ಕೆಲಸ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಾರೆ. ಈ ಮಾವಿನಹಣ್ಣಿನ ಸಂತೆಯನ್ನು ಹತ್ತಿರದಿಂದ ನೋಡಿದ ಸಿನಿಮಾ ನಿರ್ಮಾಪಕರು ಚಿತ್ರೀಕರಣವನ್ನು ಕೂಡ ಮಾಡಿದ್ದಾರೆ. ಹಳ್ಳಿಯಿಂದ ಮಾವಿನಹಣ್ಣನ್ನು ಖರೀದಿಸಿ ಪಟ್ಟಣದಲ್ಲಿ ಮಾರಾಟ ಮಾಡುವುದು ಸಾಮಾನ್ಯ. ಆದರೆ ಪಟ್ಟಣದಿಂದ ಖರೀದಿಸಿ ಅದನ್ನು ಹಳ್ಳಿಯಲ್ಲಿ ಮಾರಾಟ ಮಾಡಬಹುದು ಎನ್ನುವುದಾದರೆ ಅದು ಚಿಕ್ಕಕಡ್ನಳ್ಳಿಯ ಮಾವಿನಸಂತೆಯಲ್ಲಿ ಮಾತ್ರ ಸಾಧ್ಯ. ಹಾಗಾದರೆ ಮಾವಿನ ಹಣ್ಣಿನ ಮಾರಾಟ ಭರಾಟೆ ಹೇಗಿರಬಹುದು ನೀವೇ ಊಹಿಸಿ.