ಪ್ರಿಯಕರನ ಕಣ್ಣು ಕಿತ್ತು ಬಿಟ್ಟ ಪ್ರೇಯಸಿಯ ಅಣ್ಣ
"ನನ್ನನ್ನು ಕೊಲ್ಲೊ ತನಕ ನೆಮ್ಮದಿಯಿಲ್ಲ ಅಂತ ಅವಳ ಅಣ್ಣ ಹೇಳುತ್ತಿದ್ದ. ಆತ ಕಣ್ಣಿನೊಳಗೆ ಬೆರಳು ಹಾಕಿ ಕಣ್ಣಿನ ಗುಡ್ಡೆಗಳನ್ನೇ ಕಿತ್ತು ಹಾಕಿಬಿಟ್ಟ. ಆತ ನನ್ನನ್ನು ಕೊಲ್ಲಲು ಬಯಸಿದ್ದ" ಎಂದು ಕಣ್ಣು ಕಳೆದುಕೊಂಡ ರಾಘು ಹೇಳುತ್ತಾನೆ.
26 ವಯಸ್ಸಿನ ರಾಘು ಮಂಡ್ಯದಲ್ಲಿ ಜಿವೈಎಂ ಉದ್ಯೋಗಿ. ಆತ ನಾಲ್ಕು ವರ್ಷದಿಂದ ಅನುಷಾ(23) ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆತ ಎರಡು ವರ್ಷದ ಹಿಂದೆಯೇ ಧರ್ಮಸ್ಥಳದಲ್ಲಿ ಅನುಷಾಳನ್ನು ಮದುವೆಯಾಗಿದ್ದ. ಆದರೆ ಆಕೆಯ ಕುಟುಂಬದವರು ಬಲಪ್ರಯೋಗದ ಮೂಲಕ ಇಬ್ಬರನ್ನು ದೂರವಾಗಿಸಿದ್ದರು.
ಅವಳನ್ನು ಮತ್ತೆ ತನ್ನವಳಾಗಿಸಲು ರಾಘು ಸಾಕಷ್ಟು ಪ್ರಯತ್ನ ಮಾಡಿದ್ದ. "ಆಕೆಯ ಕುಟುಂಬ ನನ್ನ ಮೇಲೆ ಸತತ ಧಾಳಿ ಮಾಡುತ್ತಿತ್ತು. ಒಮ್ಮೆ ಸುಮಾರು 30 ಜನರ ಗ್ಯಾಂಗಿನೊಂದಿಗೆ ನನ್ನ ಕೊಲೆ ಮಾಡಲು ಬಂದಿದ್ದರು. ನಾನು ಹೇಗೋ ಪರಾರಿಯಾಗಿ ಬಿಟ್ಟೆ. ಪ್ರತಿ ಅಟ್ಯಾಕ್ ಆದಾಗಲೂ ನಾನು ಪೋಲಿಸ್ ಕಂಪ್ಲೇಟ್ ನೀಡುತ್ತಿದ್ದೆ" ಎಂದು ರಾಘು ಹೇಳುತ್ತಾನೆ.
ಕೆಲವು ದಿನದ ಹಿಂದೆ ಆತನಿಗೆ ಆಕೆಯ ಮನೆಯವರಿಂದ ಅನಿರೀಕ್ಷಿತ ಕರೆ ಬಂದಿತ್ತು. "ಅನುಷಾಳಿಗೆ ಮದುವೆ ಮಾಡುತ್ತಿದ್ದೇವೆ. ಕೊನೆಯ ಬಾರಿಗೆ ಆಕೆಯನ್ನು ನೋಡಲು ನೀನು ಬಾ" ಎಂದು ಪ್ರೀತಿಯಿಂದ ಈತನನ್ನು ಮದುವೆಗೆ ಆಮಂತ್ರಿಸಿದ್ದರು.
ರಾಘು ತನ್ನ ಸ್ನೇಹಿತರಾದ ರಾಮು, ಕಿಶೋರ್ ಮತ್ತು ನಿತೇಶ್ ಜೊತೆ ಚೆನ್ನಪಟ್ನಕ್ಕೆ ಮದುವೆಗೂ ಹೋಗಿ ಪ್ರೇಯಸಿ ಮತ್ತು ಆಕೆಯ ಪತಿಗೆ ಶುಭ ಕೋರಿದ್ದಾನೆ. ಭಾರವಾದ ಹೃದಯದೊಂದಿಗೆ ಆತ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಹತ್ತಾರು ಜನರ ಗುಂಪು ಇವರ ಬಳಿಬಂದಿದೆ. ಆಕೆಯ ಅಣ್ಣ ಅಂಜನ ಗೌಡ ತನ್ನ ಗ್ಯಾಂಗ್ ನೊಂದಿಗೆ ಇವನ ಮೇಲೆ ಮುಗಿಬಿದ್ದಿದ್ದಾರೆ. ನಂತರ ಆಕೆಯ ಅಣ್ಣ ಬೆರಳಿನಿಂದ ಕಣ್ಣನ್ನೇ ಕಿತ್ತಾಕಿ ಬಿಟ್ಟಿದ್ದಾನೆ.
ಆತನಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆಯ ಕುರಿತು ಡಾಕ್ಟರ್ ಸ್ಪಷ್ಟಪಡಿಸಿಲ್ಲ. ರಾಘುವಿನ ಸ್ನೇಹಿತರು, ಕುಟುಂಬದ ಮೂಲಕ ಮಂಡ್ಯದಲ್ಲಿ ಪೋಲಿಸ್ ಕಂಪ್ಲೇಟ್ ನೀಡಿದ್ದಾರಂತೆ. ಸಾಧ್ಯವಾದಷ್ಟು ಬೇಗ ರಾಘು ಬೆಳಕನ್ನು ನೋಡಲಿ ಎಂದು ಆತನ ಹಿತೈಷಿಗಳ ಹಾರೈಕೆ.