ಕೆಂಡ ಕೆದಕಿ ನೀರು ಹಾಕಲು ಬಂದ ಧರ್ಮೇಂದ್ರ

ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ಗಿಟ್ಟಿಸಿರುವ ನಂಬರ್ 1 ಪಟ್ಟ, ಭ್ರಷ್ಟಾಚಾರ, ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಷಯಗಳು ಬಿಜೆಪಿ ಶಾಸಕರಲ್ಲಿ ಸಾಕಷ್ಟು ಅಸಮಾಧಾನಗಳನ್ನು ಹುಟ್ಟುಹಾಕಿವೆ. ಒಂದು ದಿನ ಭಿನ್ನಮತೀಯರ ರಹಸ್ಯ ಭೇಟಿ, ಮರುದಿನ ಏನೂ ನಡೆದೇಯಿಲ್ಲ, ನಾವೆಲ್ಲರೂ ಒಂದಾಗಿಯೇ ಇದ್ದೇವೆ ಎಂಬ ನಾಯಕರ ಪೋಸು ಪ್ರತಿನಿತ್ಯದ ವಿದ್ಯಮಾನವಾಗಿದೆ.
ಇಂದು ಪ್ರಧಾನ್ ಅವರು ಬೆಂಗಳೂರಿಗೆ ಬರುತ್ತಿದ್ದಂತೆಯೇ ಮೊದಲು ಭಿನ್ನಮತೀಯರ ಅಧಿನಾಯಕ, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಿಜೆಪಿಯಲ್ಲಿ ಭಿನ್ನಮತವಿರುವುದನ್ನು ಒಪ್ಪಿಕೊಂಡ ಈಶ್ವರಪ್ಪ, ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ. ಕರ್ನಾಟಕದ ಹುಟ್ಟಿರುವ ಭಿನ್ನಮತದ ಪೆಟ್ಟಿಗೆಯನ್ನು ಹೊತ್ತು ಇತರರೊಂದಿಗೆ ಈಶ್ವರಪ್ಪ ಅವರೇ ವರಿಷ್ಠನ್ನು ಕೆಲದಿನಗಳ ಹಿಂದೆ ಭೇಟಿ ಮಾಡಿದ್ದರು.
ಅತೃಪ್ತಗೊಂಡಿರುವ ನಾನಾ ಶಾಸಕರನ್ನು ವೈಯಕ್ತಿಕವಾಗಿ ಧರ್ಮೇಂದ್ರ ಪ್ರಧಾನ್ ಭೇಟಿಯಾಗಲಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಗೆ ಬಿಜೆಪಿ ಸಮನ್ವಯ ಸಮಿತಿ ಸಭೆಯೂ ನಡೆಯಲಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೂ ಭಾಗವಹಿಸಲಿದ್ದಾರೆ. ಏ.21ರಂದು ಕೂಡ ಬೆಂಗಳೂರಿನಲ್ಲೇ ಠಿಕಾಣಿ ಹೂಡಲಿದ್ದಾರೆ ಪ್ರಧಾನ್.












Click it and Unblock the Notifications