ಬಳ್ಳಾರಿ : ಮಾನವೀಯತೆಗೆ ಸಿಕ್ಕ ಬೆಲೆ ಇಷ್ಟೇನಾ?

ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದ ಶವಗಳು, ಗಾಯಾಳುಗಳು ಮತ್ತು ಅಳಿದುಳಿದ ಅವಶೇಷಗಳನ್ನು ಹೊರಕ್ಕೆ ತೆಗೆಯಲು ಇದ್ದ ಸ್ಥಳಾಭಾವ ಪರಿಹಾರ ಸಿಬ್ಬಂದಿಯನ್ನು ತೀವ್ರವಾಗಿ ಕಾಡಿತ್ತು. ಆ ಸಂದರ್ಭದಲ್ಲಿ ನೆರೆಮನೆಯ ರವಿಚಂದ್ರನ್ ಅವರ ಮನವೊಲಿಸಿದ ಪಾಲಿಕೆ ಆಯುಕ್ತರ ಮನವಿಯ ಮೇರೆಗೆ, ಮಾನವೀಯತೆಯ ಆಧಾರದ ಮೇಲೆ ತಮ್ಮ ಕಟ್ಟಡ ಧ್ವಂಸಗೊಳಿಸಲು ಅವಕಾಶ ನೀಡಿದ್ದರು. ಇದರಿಂದಾಗಿ ಅನೇಕ ಕಾರ್ಮಿಕರ ಜೀವ ಉಳಿದಿತ್ತು. ಮಲ್ಲಯ್ಯ ಎಂಬಾತ ಪವಾಡಸದೃಶ ಜೀವಂತವಾಗಿ ಹೊರಬಂದಿದ್ದ.
ರವಿಚಂದ್ರನ್ ತೋರಿದ್ದ ಮಾನವೀಯತೆ ಮರೆತ ಪಾಲಿಕೆ, ಘಟನೆ ನಡೆದು 1 ವರ್ಷವಾದರೂ ಇವರಿಗೆ ಪರಿಹಾರ ನೀಡಿರಲಿಲ್ಲ. ಹತಾಶರಾದರೂ ರವಿಚಂದ್ರನ್ ತಮ್ಮ ಹೋರಾಟ ಕೈಬಿಡಲಿಲ್ಲ. ರವಿಚಂದ್ರನ್ ಅವರು ಪರಿಹಾರಕ್ಕಾಗಿ ಕಾರ್ಪೊರೇಟರ್ಗಳನ್ನು ಸಂಪರ್ಕಿಸಿದಾಗಲೆಲ್ಲಾ ಯಡಿಯೂರಪ್ಪ ಅವರ ಸರ್ಕಾರದ ಭವಿಷ್ಯ ಅತಂತ್ರಕ್ಕೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಯಾವೊಬ್ಬ ಕಾರ್ಪೊರೇಟರ್ಗಳು ಕೂಡ ರವಿಚಂದ್ರನ್ಗೆ ಪರಿಹಾರ ನೀಡಿಸಲು ಆಸಕ್ತಿ ತೋರುತ್ತಿರಲಿಲ್ಲ. ಪರಿಹಾರ ನೀಡಬೇಕಾಗಿದ್ದ ಆಯುಕ್ತ ಬಿ. ತಿಮ್ಮಪ್ಪ ಕೂಡ ವರ್ಗವಾದರು.
ತೀವ್ರ ಆತಂಕ್ಕೆ ಈಡಾಗಿದ್ದ ರವಿಚಂದ್ರನ್ ತಮ್ಮ ಹೋರಾಟವನ್ನು ಮುಂದುವರೆಸಿ ಪರಿಹಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ವಿಶೇಷ ಅನುದಾನದ ಅಡಿಯಲ್ಲಿ ರುಪಾಯಿ 2,10,150 ಅನ್ನು ಬಿಡುಗಡೆ ಮಾಡಿದ್ದು, ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಅವರು ಸೋಮವಾರ ಚೆಕ್ ನೀಡಿದ್ದಾರೆ.












Click it and Unblock the Notifications