ಹಿಂದಿ ಉತ್ತರ ಪತ್ರಿಕೆ ಭಸ್ಮ : ಏ.27 ಮರುಪರೀಕ್ಷೆ

ಇದನ್ನು ಇಂದು ತಿಳಿಸಿದ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, 14 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಮೈಸೂರಿನ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರವೇಶ ಪತ್ರ ಕಳುಹಿಸಲಾಗಿದೆ. ಮೇ 15ರಂದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬೀಳಲಿದೆ ಎಂದು ಅವರು ವಿವರಿಸಿದರು.
ಶಿವಮೊಗ್ಗ ನಗರದ ಬಸವೇಶ್ವರ ಸರ್ಕಾರಿ ಶಾಲೆಯಲ್ಲಿ ಕಿಟಕಿ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ಸಿಡಿದ ಪರಿಣಾಮ 100ಕ್ಕೂ ಹೆಚ್ಚು ಹಿಂದಿ ಉತ್ತರಪತ್ರಿಕೆಗಳ ಬಂಡಲ್ಗಳು ಬೆಂಕಿಗೆ ಆಹುತಿಯಾಗಿದ್ದವು. ಯಾರೋ ಮಾಡಿದ ತಪ್ಪಿಗೆ ಮರುಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಮಕ್ಕಳಿಗೆ ಎದುರಾಗಿದೆ. ಅಲ್ಲದೆ, ಮಕ್ಕಳೆಲ್ಲ ರಜೆಯ ಮಜಾವನ್ನೂ ಈ ಮರುಪರೀಕ್ಷೆಯಿಂದ ಕಿತ್ತುಕೊಳ್ಳಲಾಗಿದೆ ಎಂದು ಸಾರ್ವಜನಿಕ ವಲಯದಿಂದ ಟೀಕೆಗಳು ಬಂದಿವೆ.
ಹಲವು ಪ್ರಶ್ನೆಗಳು : ಈ ಮರುಪರೀಕ್ಷೆಯಿಂದಾಗಿ ಅನೇಕ ಪ್ರಶ್ನೆಗಳು ಮತ್ತು ಸಮಸ್ಯೆಗಳು ಎದುರಾಗಿವೆ. ಎಂಥ ಬಗೆಯ ಪ್ರಶ್ನೆ ಪತ್ರಿಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಚಿಸುತ್ತದೆ? ಈ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಏನಾದರೂ ನೀಡುತ್ತಾರಾ? ಮೊದಲ ಉತ್ತರ ಪತ್ರಿಕೆಯಲ್ಲಿ ಉತ್ತಮವಾಗಿ ಬರೆದು ಇದರಲ್ಲಿ ಫೇಲ್ ಆದರೆ? ಅಚಾತುರ್ಯ ಮಾಡಿದವರ ಮೇಲೆ ಶಿಕ್ಷಣ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ? ಈ ಪ್ರಶ್ನೆಗಳಿಗೆ ಕಾಗೇರಿಯವರು ಉತ್ತರಿಸುವರೆ?












Click it and Unblock the Notifications