ಸಚಿನ್ 'ಸೆಂಚುರಿ'ಗಾಗಿ ಲತಾ ದೀದಿ ಉಪವಾಸ ವ್ರತ
ಮುಂಬೈ, ಏಪ್ರಿಲ್ 1: ಗಾನ ಕೋಗಿಲೆ ಲತಾ ಮಂಗೇಷ್ಕರ್ ಅವರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಅದರಲ್ಲೂ ಚಿನ್ನದಂತ ತಮ್ಮ ಸಚಿನ್ನ ತೆಂಡೂಲ್ಕರ್ ಮೇಲೆ ಬಲುಪ್ರೀತಿ. ಇಂಥ ದೀದಿ, ನಾಳೆ ಶನಿವಾರ ಭಾರತ-ಶ್ರೀಲಂಕಾ ಫೈನಲ್ ಹಣಾಹಣಿಯಲ್ಲಿ ತೆಂಡೂಲ್ಕರ್ ನೂರನೇ ಸೆಂಚುರಿ ಬಾರಿಸಲಿ, ಜತೆಗೆ ಭಾರತವೂ ಗೆಲ್ಲಲಿ ಎಂದು ಹಾರೈಸುತ್ತಾ ಉಪವಾಸ ವ್ರತದಲ್ಲಿ ತೊಡಗಲಿದ್ದಾರೆ.
ಲತಾಗೆ ಕ್ರಿಕೆಟ್ ಬಗ್ಗೆ ಎಷ್ಟು ಹುಚ್ಚೆಂದರೆ ಕಪಿಲ್ ಸಾಬ್ 83ರಲ್ಲಿ ಪ್ರುಡೆನ್ಷಿಯಲ್ ಕಪ್ ಗೆದ್ದಿದ್ದನ್ನು ಲಾರ್ಡ್ಸ್ ನಲ್ಲಿ ಕಣ್ಣಾರೆ ಕಂಡಿದ್ದರು. 'ಫೈನಲ್ ಮ್ಯಾಚ್ ಗೂ ಮುನ್ನ ಕಪಿಲ್ ಡೆವಿಲ್ಸ್ ಅನ್ನು ಹೋಟೆಲ್ ಗೆ ಕರೆಸಿಕೊಂಡು ಚಿಕ್ಕ ಪಾರ್ಟಿ ಕೊಟ್ಟು, ಶುಭ ಹಾರೈಸಿದ್ದೆ. ಕಪ್ ಗೆದ್ದ ಮೇಲೆ ಕಪಿಲ್ ನನ್ನನ್ನು ಔತಣಕ್ಕೆ ಆಹ್ವಾನಿಸಿದ್ದರು' ಎಂದು ಅಂದಿನ ಆನಂದವನ್ನು ಮೆಲುಕು ಹಾಕಿದ್ದಾರೆ. ಇದೀಗ ವಯೋಸಹಜವಾಗಿ ಮನೆಯಲ್ಲೇ ಮನೆಮಂದಿಯನ್ನೆಲ್ಲ ಗುಡ್ಡೆ ಹಾಕಿಕೊಂಡು ಸಚಿನ್ ಸೆಂಚುರಿ ಬಾರಿಸುವುದನ್ನು ನೋಡಿ ಆನಂದಿಸಲು ತವಕಿಸುತ್ತಿದ್ದಾರೆ.
ಲತಾ ಈ ಇಳಿವಯಸ್ಸಲ್ಲೂ (81) ಮೊನ್ನೆ ಬುಧವಾರವೂ ಹೀಗೆ ಉಪವಾಸ ವ್ರತ ಕೈಗೊಂಡಿದ್ದರು: 'ಸಚಿನ್ ಸೆಂಚುರಿ ಸಿಡಿಸಲಿ, ಭಾರತ ಗೆಲ್ಲಲಿ' ಎಂದು ಪ್ರಾರ್ಥಿಸಿ. ಮಾಸ್ಟರ್ ಬ್ಲಾಸ್ಟರ್ ಎಸ್ಸಾರ್ ತೆಂಡೂಲ್ಕರ್ ನನಗೆ ಮಗನ ಸಮಾನ. ಅವ ಇನ್ನೊಂದೇ ಒಂದು ಸೆಂಚುರಿ ಬಾರಿಸಲಿ. ನಾನು ಅದನ್ನು ಕಣ್ಣಾರೆ ಕಾಣಬೇಕು ಎಂದು ಅವರು ಬಯಸಿದ್ದಾರೆ. ಅದಕ್ಕೆಂದೇ ಮ್ಯಾಚ್ ದಿನ ಒಂದು ತೊಟ್ಟು ನೀರೂ ಕುಡಿಯದೆ ಕಟ್ಟುನಿಟ್ಟಿನ ಉಪವಾಸ ಮಾಡಲಿದ್ದಾರೆ.
ಭಾರತದ ಪಂದ್ಯಗಳಿರುವಾಗ ನಮ್ಮ ಮನೆಯಲ್ಲಿ ಒಬ್ಬೊಬ್ಬರೂ ಒಂದೊಂಥರಾ (ಮೂಢ) ನಂಬಿಕೆಗಳನ್ನಾಚರಿಸುತ್ತೇವೆ. ಸೆಮಿಫೈನಲ್ಸ್ ದಿನ ನಾನು, ಮೀನಾ, ಉಶಾ ಏನನ್ನೂ ತಿನ್ನಲಿಲ್ಲ. ಕುಡಿಯಲಿಲ್ಲ. ಭಾರತ ಜಯ ದಾಖಲಿಸಿದ ಬಳಿಕವಷ್ಟೇ ಊಟ ಮಾಡಿದ್ದು ಎಂದು ಹಿರಿಯಕ್ಕ ಲತಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಕಪಿಲ್ ಡೆವಿಲ್ಸ್ ಪ್ರುಡೆನ್ಷಿಯಲ್ ಕಪ್ ಗೆದ್ದು ತವರಿಗೆ ಮರಳಿದಾಗ ಲತಾ ಒಂದೂ ಪೈಸೆ ಪಡೆಯದೆ ತಂಡಕ್ಕಾಗಿ ಸಂಗೀತ ರಸಮಂಜರಿ ನಡೆಸಿಕೊಟ್ಟಿದ್ದರು. ತಂಡದ ಎಲ್ಲ ಆಟಗಾರರೂ ಲತಾ ಜತೆ ದನಿಗೂಡಿಸಿದ್ದರು. ಈ ಬಾರಿ ಸ್ವಂತ ನೆಲದಲ್ಲಿ 28 ವರ್ಷಗಳ ನಂತರ 'ಆಕ್ಷನ್ ರಿಪ್ಲೆ' ಆಗುತ್ತದಾ!?












Click it and Unblock the Notifications