ಸುದೀಪ್ ರಾಜಕೀಯ ಎಂಟ್ರಿ ಸಾಧ್ಯತೆ?
ಆಪರೇಷನ್ ಕಮಲದಿಂದ ತೆರವಾಗಿರುವ ಚೆನ್ನಪಟ್ಟಣ, ಜಗಳೂರು ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆ ಕಣ ದಿನದಿನಕ್ಕೆ ರಂಗೇರುತ್ತಿದೆ. ಪ್ರತಿಯೊಂದು ಪಕ್ಷ ಕೂಡಾ ಪ್ರತಿಷ್ಠೆ ಉಳಿಸಿಕೊಳ್ಳಲು ಹಾಗೂ ಪ್ರತಿಪಕ್ಷಗಳು ಹೇಗಾದರೂ ಮಾಡಿ ಬಿಜೆಪಿಗೆ ಆ ಕ್ಷೇತ್ರಗಳಲ್ಲಿ ಮಣ್ಣು ಮುಕ್ಕಿಸಲು ತಂತ್ರ ರೂಪಿಸುತ್ತಿವೆ.
ಜಗಳೂರು ಮೀಸಲು ಕ್ಷೇತ್ರವಾಗಿರುವುದು ಹಾಗೂ ಸುದೀಪ್ ಸಹ ಅದೇ ವರ್ಗಕ್ಕೆ ಸೇರಿರುವುದು ಮತ್ತು ಸುದೀಪ್ ಕುಟುಂಬವೂ ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡಿರುವುದರಿಂದ ಸುದೀಪ್ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಸುದೀಪ್ ಅವರ ಚಿಕ್ಕಪ್ಪ ಸರೋವರ್ ಶ್ರೀನಿವಾಸ್ ಜೆಡಿಎಸ್ ವಿಧಾನ ಪರಿಷತ್ ಸದಸ್ಯರೂ ಆಗಿರುವುದರಿಂದ ಸುದೀಪ್ ಅವರನ್ನು ಜೆಡಿಎಸ್ನಿಂದಲೇ ಕಣಕ್ಕಿಳಿಸುವ ಯತ್ನಿಸಲಾಗುತ್ತಿದೆ.
ಈಗಾಗಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿ ಬಂಗಾರಪೇಟೆಯಲ್ಲಿ ಪಕ್ಷ ಸೇರಿರುವ ಕಾಂಗ್ರೆಸ್ನ ಎಂ ನಾರಾಯಣಸ್ವಾಮಿ, ಜಗಳೂರಿನಲ್ಲಿ ಎಸ್ ವಿ ರಾಮಚಂದ್ರ, ಚೆನ್ನಪಟ್ಟಣದಲ್ಲಿ ಚಿತ್ರನಟ ಸಿಪಿ ಯೋಗೀಶ್ವರ್ ಅವರನ್ನು ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದೆ. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಿದ್ದರೂ ನಾಮಪತ್ರ ಸಲ್ಲಿಕೆಗೆ ಕೊನೆ ದಿನದ ಕಸರತ್ತು ಮಾಡುವ ಕಾಂಗ್ರೆಸ್ ಇನ್ನೂ ಲೆಕ್ಕಾಚಾರ ಮುಗಿಸಿಲ್ಲ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಇಳಿದರೆ ಅವರಿಗೆ ಸಾಥ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಚನ್ನಪಟ್ಟಣ ನಂತರ ಉಳಿದ ಎರಡು ಕ್ಷೇತ್ರಗಳ ಪೈಕಿ ಜಗಳೂರಿನಲ್ಲಿಯೂ ಪ್ರಬಲ ಅಭ್ಯರ್ಥಿ ಹಾಕಲೇಬೇಕೆಂಬ ನಿರ್ಧಾರಕ್ಕೆ ಜೆಡಿಎಸ್ ಬಂದಿದೆ. ಬಂಗಾರಪೇಟೆ ಕ್ಷೇತ್ರದಲ್ಲಿಯೂ ಇದೇ ರೀತಿ ಬಲಿಷ್ಠ ಅಭ್ಯರ್ಥಿಯ ಹುಡುಕಾಟ ನಡೆಸಲಾಗಿದೆ.